ವಿಜಯಪುರ: ‘ವಿದ್ಯಾರ್ಥಿಗಳು ಕಠಿಣ ಪರಿಶ್ರಮ, ಶ್ರದ್ಧೆ ಹಾಗೂ ತಪಸ್ಸು ಮಾಡಿ ಓದಿದರೆ ಸಾಧನೆ ಮಾಡುವುದು ಕಷ್ಟವಲ್ಲ. ಇಚ್ಛಾಶಕ್ತಿಯಿಂದ ಪ್ರಾಮಾಣಿಕ ಪ್ರಯತ್ನ ಮಾಡಬೇಕು’ ಎಂದು ಸರ್ಕಾರಿ ಬಾಲಕಿಯರ ಮಾದರಿ ಹಿರಿಯ ಪಾಠಶಾಲೆಯ ಮುಖ್ಯಶಿಕ್ಷಕ ಮನೋಹರ್ ಹೇಳಿದರು.
ಇಲ್ಲಿನ ಸರ್ಕಾರಿ ಬಾಲಕಿಯರ ಮಾದರಿ ಹಿರಿಯ ಪಾಠಶಾಲೆಯಲ್ಲಿ ಸೋಮವಾರ ಅಗಸ್ತ್ಯ ಫೌಂಡೇಷನ್ಯಿಂದ 6ನೇ ತರಗತಿಯ ಮಕ್ಕಳಿಗೆ 200ಕ್ಕೂ ಹೆಚ್ಚು ಪ್ರಯೋಗಾತ್ಮಕ ಉಪಕರಣಗಳ ಕಿಟ್ ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಂತ್ರಜ್ಞಾನವೆಂಬುದು ಇಂಗ್ಲಿಷ್ ಮೂಲದ್ದು. ಹೀಗಾಗಿ, ಕನ್ನಡದವರಿಗೆ ಇದು ಕಬ್ಬಿಣದ ಕಡಲೆ ಎಂಬ ಮಾತು ಸಾಮಾನ್ಯವಾಗಿ ಕೇಳಿಬರುತ್ತಿದೆ. ಆದರೆ, ಕನ್ನಡದಲ್ಲೂ ಇದನ್ನು ಸುಲಭವಾಗಿ ಕಲಿಯುವುದಕ್ಕೆ ನೆರವಾಗಲು ಅಂತರ್ಜಾಲ ನೆರವಾಗಿದೆ ಎಂದು ಹೇಳಿದರು.
ಬದಲಾಗುತ್ತಿರುವ ಕಾಲಮಾನದಲ್ಲಿ ವಿಜ್ಞಾನ ಅತಿವೇಗವಾಗಿ ಬೆಳೆಯುತ್ತಿದೆ. ಮನುಷ್ಯನ ಪ್ರತಿಯೊಂದು ಬೆಳವಣಿಗೆಗೂ ವಿಜ್ಞಾನ ಸಹಾಯಕವಾಗಿದೆ. ವಿಜ್ಞಾನವಿಲ್ಲದೆ ಯಾರಿಗೂ ಭವಿಷ್ಯವಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ವಿಜ್ಞಾನ ಕಲಿಕೆಯ ಕಡೆಗೆ ಹೆಚ್ಚು ಗಮನಹರಿಸಬೇಕು ಎಂದರು.
ಅಗಸ್ತ್ಯ ಫೌಂಡೇಷನ್ನ ತಾಲ್ಲೂಕು ಸಂಯೋಜಕ ಸತೀಶ್ ನಾಯಕ್ ಮಾತನಾಡಿ, ಮಕ್ಕಳು ಶಿಕ್ಷಕರ ಮಾರ್ಗದರ್ಶನದೊಂದಿಗೆ ಸಂಸ್ಥೆಯಿಂದ ನೀಡಿರುವ ಈ ಉಪಕರಣಗಳ ಕಿಟ್ ಬಳಸಿಕೊಂಡು ತಮ್ಮ ಬುದ್ಧಿಮತ್ತೆಯನ್ನು ಒರೆಗೆ ಹಚ್ಚುವಂತಹ ಕೆಲಸವಾಗಬೇಕು ಎಂದು ತಿಳಿಸಿದರು.
ಭವಿಷ್ಯದಲ್ಲಿ ಉತ್ತಮ ವಿಜ್ಞಾನಿಯಾಗಬೇಕಾದರೆ ಚಿಕ್ಕವಯಸ್ಸಿನಿಂದಲೇ ಪ್ರತಿಯೊಂದನ್ನು ಪರಿಶೀಲಿಸುವ ಹಾಗೂ ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.