ಟರ್ಮಿನಲ್ ಚಾವಣಿಯಿಂದ ಮಳೆ ನೀರು ಸೋರಿದ್ದು ಪ್ರಯಾಣಿಕರು ಲಗೇಜ್ ಪಡೆಯುವ ಬೇ ಪ್ರದೇಶದಲ್ಲಿ ನೀರು ಸಂಗ್ರಹವಾಗಿತ್ತು. ಇದರಿಂದಾಗಿ ನಿಲ್ದಾಣದ ಸಿಬ್ಬಂದಿ ಸೇರಿದಂತೆ ಪ್ರಯಾಣಿಕರು ಕಿರಿಕಿರಿ ಅನುಭವಿಸಿದರು.
ರಾತ್ರಿ ಸುರಿದ ಧಾರಾಕಾರ ಮಳೆಗೆ ರನ್ ವೇ ಸ್ಪಷ್ಟವಾಗಿ ಕಾಣದ ಕಾರಣ 18ಕ್ಕೂ ಹೆಚ್ಚು ವಿಮಾನಗಳ ಮಾರ್ಗ ಬದಲಾವಣೆ ಮಾಡಿ ಬೇರೆ ವಿಮಾನ ನಿಲ್ದಾಣಗಳಿಗೆ ಕಳಿಸಲಾಯಿತು.
ಈ ಕುರಿತು ಸಾಮಾಜಿಕ ಜಾಲತಾಣ 'ಎಕ್ಸ್' ನಲ್ಲಿ ಪ್ರಯಾಣಿಕರು ಆಕ್ರೋಶ ಹೊರ ಹಾಕಿದ್ದಾರೆ.
'ವಿಮಾನ ನಿಲ್ದಾಣದ ಕಾರ್ ಪಾರ್ಕಿಂಗ್ ಸ್ಥಳವೂ ಮಳೆ ನೀರಿನಿಂದ ತುಂಬಿ ಹೋಗಿದೆ. ಸೂಕ್ತವಾಗಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ. ಇದನ್ನು ವಿನ್ಯಾಸ ಮಾಡಿದ ಎಂಜಿನಿಯರ್, ನಿರ್ಮಿಸಿದ ಗುತ್ತಿಗೆದಾರರು ಯಾವ ರೀತಿ ಕೆಲಸ ಮಾಡಿದ್ದಾರೆ ಎನ್ನಲು ಇದು ಕೈಗನ್ನಡಿ' ಎಂದು ವೇದಂ ಜಯ ಶಂಕರ್ ಕಿಡಿಕಾರಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ದೀಪ ದೇವಿಕಾ 'ಒಂದು ಮಳೆಗೆ ವಿಮಾನ ನಿಲ್ದಾಣದ ನಿಜವಾದ ಬಣ್ಣ ಬಯಲಾಗಿದೆ. ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ರಸ್ತೆಗಳು ನೀರಿನಿಂದ ಆವೃತ್ತವಾಗಿದೆ. ಬೀದಿ ದೀಪವಿಲ್ಲದೇ ಮಂಡಿವರೆಗೂ ಹರಿಯುವ ನೀರಿನಲ್ಲಿ ಸಾಗುವ ದುಸ್ಥಿತಿಗೆ ತಲುಪಿದ್ದೇವೆ' ಎಂದು ಬೇಸರ ಹೊರ ಹಾಕಿದ್ದಾರೆ.
ಪ್ರಧಾನ ಮಂತ್ರಿ ಅವರಿಗೆ ಎಕ್ಸ್ನಲ್ಲಿ ಸಂದೇಶ ಟ್ಯಾಗ್ ಮಾಡಿರುವ ಡಿ. ರವಿ ಕುಮಾರ್ 'ಪ್ರಾಮಾಣಿಕತೆ ಕಣ್ಮರೆಯಾಗಿದ್ದು, ಭ್ರಷ್ಟಾಚಾರ ತಾಂಡವವಾಡುತ್ತಿದೆ. ಆಡಳಿತದ ವೈಫಲ್ಯ ಎದ್ದು ಕಾಣುತ್ತಿದೆ' ಎಂದು ಆರೋಪಿಸಿದ್ದಾರೆ.
ಇದಕ್ಕೆ ವೇದಂ ಜಯಶಂಕರ್, 'ಆಳುವ ವರ್ಗ ಪಾರದರ್ಶಕ ಮತ್ತು ದಕ್ಷ ಆಗಿದ್ದರೆ ವಿಮಾನ ನಿಲ್ದಾಣ ನಿರ್ಮಿಸಿದ ಎಂಜಿನಿಯರ್ ಹಾಗೂ ಗುತ್ತಿಗೆದಾರರನ್ನು ಬಂಧಿಸುತ್ತಾರೆಯೇ ನೋಡೋಣ' ಎಂಬ ಪ್ರಶ್ನೆ ಎತ್ತಿದ್ದಾರೆ.