ವಿಜಯಪುರ: ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಇಲ್ಲಿನ ಪುರಸಭೆ 23 ವಾರ್ಡ್ಗಳ ಮೀಸಲಾತಿ ಪಟ್ಟಿ ರದ್ದುಗೊಳಿಸಿ ಹೊಸಪಟ್ಟಿ ಸಿದ್ಧಪಡಿಸುವಂತೆ ಹೈಕೋರ್ಟ್ ಸೂಚನೆ ನೀಡಿದರೂ, ಹೊಸ ಮೀಸಲಾತಿ ಪಟ್ಟಿ ಪ್ರಕಟವಾಗಿಲ್ಲ. ಇದರಿಂದ ಆಕಾಂಕ್ಷಿಗಳಲ್ಲಿ ಕಾತುರ ಹೆಚ್ಚಾಗಿದೆ ಎಂದು ರಾಜಗೋಪಾಲ್ ತಿಳಿಸಿದರು.
ಕೆಲ ಆಕಾಂಕ್ಷಿಗಳು ಹಿಂದಿನ ಮೀಸಲಾತಿ ಪ್ರಕಾರ ಟಿಕೆಟ್ ಸಿಗುತ್ತದೆ ಎನ್ನುವ ನಿರೀಕ್ಷೆಯಲ್ಲಿ ಪ್ರಚಾರ ಕಾರ್ಯ ಕೈಗೊಂಡಿದ್ದರು. ಈಗ ಹೈಕೋರ್ಟ್ ಆದೇಶದಿಂದಾಗಿ ಪ್ರಚಾರ ಕಾರ್ಯ ನಿಲ್ಲಿಸಿದ್ದಾರೆ. ಇದುವರೆಗೂ ಪಟ್ಟಿ ಬಿಡುಗಡೆಯಾಗದ ಕಾರಣ ಯಾವ ವಾರ್ಡ್ಗಳಲ್ಲಿ ಸಿದ್ಧತೆ ಮಾಡಿಕೊಳ್ಳಬೇಕು ಎನ್ನುವ ಗೊಂದಲ ನಿರ್ಮಾಣವಾಗಿದೆ ಎಂದರು.
ಆಕಾಂಕ್ಷಿ ಮಹೇಶ್ ಕುಮಾರ್ ಮಾತನಾಡಿ, ವಾರ್ಡ್ಗಳ ಮೀಸಲಾತಿ ಪ್ರಕಟಣೆ ವಿಳಂಬವಾಗುತ್ತಿರುವುದರಿಂದ ಗೊಂದಲ ಹೆಚ್ಚಾಗಿದೆ ಎಂದರು.
ಬಿಜೆಪಿ ನಗರ ಘಟಕದ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಮಾತನಾಡಿ, ಜನರು ನೀಡಿದ್ದ ಅವಕಾಶ ಸದುಪಯೋಗ ಮಾಡಿಕೊಳ್ಳುವಲ್ಲಿ ಕಾಂಗ್ರೆಸ್, ಜೆಡಿಎಸ್ ಸದಸ್ಯರು ವಿಫಲರಾಗಿದ್ದಾರೆ ಎಂದು ದೂರಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮಚಂದ್ರಪ್ಪ ಮಾತನಾಡಿ, ಕಳೆದ ಚುನಾವಣೆಯಲ್ಲಿ ಪಕ್ಷದ ಸದಸ್ಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆ ಮಾಡಲಾಗಿತ್ತು. ಎರಡೂವರೆ ವರ್ಷಗಳ ಕಾಲ ಉತ್ತಮವಾಗಿ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಸದಸ್ಯರು ವಾರ್ಡ್ಗಳನ್ನು ಕಡೆಗಣಿಸಿಲ್ಲ ಎಂದು ತಿಳಿಸಿದರು.
ಪುರಸಭಾ ಮುಖ್ಯಾಧಿಕಾರಿ ಎ.ಎಚ್.ನಾಗರಾಜ್ ಮಾತನಾಡಿ, ಯಾವ ವಾರ್ಡ್ನ್ನೂ ಕಡೆಗಣಿಸಿಲ್ಲ. ಇರುವ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಲಾಗುತ್ತಿದೆ ಎಂದರು.