ಹೊಸಕೋಟೆ: ಬೆಂಗಳೂರು ಹಾಲು ಒಕ್ಕೂಟ, ಹೊಸಕೋಟೆ ಶಿಬಿರ ಕಚೇರಿ, ಹಾಲು ಉತ್ಪಾದಕರ ಸಹಕಾರ ಸಂಘದ ಸಹಯೋಗದಡಿ ತಾಲ್ಲೂಕಿನಕಲ್ಲಹಳ್ಳಿಯಲ್ಲಿ ಕ್ಷೀರ ಕ್ರಾಂತಿ ಪಿತಾಮಹ ಡಾ.ವರ್ಗೀಸ್ ಕುರಿಯನ್ ಅವರ ಜನ್ಮ ದಿನದ ಅಂಗವಾಗಿ ರಾಷ್ಟ್ರೀಯ ಹಾಲು ದಿನಾಚರಣೆ, ರಾಸುಗಳಿಗೆ ಬಂಜೆತನ ನಿವಾರಣಾ ಶಿಬಿರ ನಡೆಯಿತು.
ಶಿಬಿರದ ಉಪ ವ್ಯವಸ್ಥಾಪಕ ಡಾ.ಶಿವಾಜಿ ನಾಯಕ್ ಮಾತನಾಡಿ, ಅಸಂಘಟಿತ ಹಾಲು ಉತ್ಪಾದಕರ ಸಂಕಟ ನೋಡಲಾಗದೆ ತಮ್ಮ ವೃತ್ತಿ ಬದಲಾಯಿಸಿಕೊಂಡು ರೈತರ ಸಂಕಷ್ಟವನ್ನು ದೂರ ಮಾಡಲು ಗುಜರಾತ್ನಲ್ಲಿ ಅವರು ಕ್ಷೀರ ಕ್ರಾಂತಿಗೆ ಮುನ್ನುಡಿ ಬರೆದರು. ಹಾಗಾಗಿ, ಪ್ರತಿದಿನ ಮನೆಗಳಲ್ಲಿ ದೀಪ ಹಚ್ಚಿ ಕುರಿಯನ್ ಅವರಿಗೆ ಗೌರವ ಸಲ್ಲಿಸಬೇಕಿದೆ ಎಂದು ಸಲಹೆ ನೀಡಿದರು.
ವರ್ಗೀಸ್ ಕುರಿಯನ್ ಹೆಸರಲ್ಲಿ ಕಲ್ಲಹಳ್ಳಿಯನ್ನು ಆಯ್ಕೆ ಮಾಡಿಕೊಂಡು ಪಶು ಆರೋಗ್ಯ ಮತ್ತು ಹಸುಗಳಿಗೆ ಲಸಿಕೆ ನೀಡುತ್ತಿದ್ದೇವೆ. ಗ್ರಾಮದ ಡೇರಿಯು ತಾಲ್ಲೂಕಿನಲ್ಲಿ ಎ ಶ್ರೇಣಿ ಪಡೆದಿದೆ ಎಂದರು.
ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕೆ.ಪಿ. ಮುನೇಗೌಡ, ಉಪಾಧ್ಯಕ್ಷ ಕೃಷ್ಣಪ್ಪ, ಪಶು ವೈದ್ಯರಾದ ಡಾ.ದೀಪ್ತಿ, ಡಾ ಅಜೇಯ್ ಕುಮಾರ್, ವಿಸ್ತರಣಾಧಿಕಾರಿ ದಿವ್ಯ, ಕೃಷಿ ವಿಸ್ತಣಾಧಿಕಾರಿ ಸೌಮ್ಯ, ಸಂತೋಷಕುಮಾರ್, ಭರತ್ ಶರ್ಮ ಹಾಗೂ ಸಂಘದ ನಿರ್ದೇಶಕರು ಹಾಜರಿದ್ದರು.