ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡಾಲ ಅಂಕಲಗಿ ದುರಂತ: ಶಿಥಿಲ ಮನೆಗಳ ವೀಕ್ಷಣೆಗೆ ಒಲ್ಲೆ ಎಂದ ಗೋವಿಂದ ಕಾರಜೋಳ!

Last Updated 7 ಅಕ್ಟೋಬರ್ 2021, 13:49 IST
ಅಕ್ಷರ ಗಾತ್ರ

ಬೆಳಗಾವಿ: ತಾಲ್ಲೂಕಿನ ಬಡಾಲ ಅಂಕಲಗಿಯಲ್ಲಿ ಮನೆಯ ಗೋಡೆ ಕುಸಿದು 7 ಮಂದಿ ಮೃತಪಟ್ಟ ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು, ಶಿಥಿಲಗೊಂಡಿರುವ ಮನೆಗಳನ್ನು ವೀಕ್ಷಿಸುವಂತೆ ಗ್ರಾಮಸ್ಥರು ಮಾಡಿಕೊಂಡ ಮನವಿಗೆ ಒಪ್ಪಲಿಲ್ಲ.

ಮೃತರ ಕುಟುಂಬದವರಿಗೆ ಪರಿಹಾರ ಧನದ ಚೆಕ್ ವಿತರಿಸಿ ಮರಳುತ್ತಿದ್ದ ಅವರನ್ನು ಗ್ರಾಮದ ಕೆಲವು ಯುವಕರು ಮತ್ತು ಮುಖಂಡರು ಎದುರಾದರು. ‘ನಮ್ಮೂರಲ್ಲಿ ಮತ್ತಷ್ಟು ಮನೆಗಳು ಮಳೆಯಿಂದಾಗಿ ಶಿಥಿಲಗೊಂಡಿವೆ. ಇತ್ತೀಚೆಗೆ ಜೋರು ಮಳೆ ಆಗುತ್ತಿದ್ದು, ಅವುಗಳೂ ಬೀಳುವ ಹಂತದಲ್ಲಿವೆ. ನೀವು ಬಂದು ವೀಕ್ಷಿಸಬೇಕು. ಜನರಿಗೆ ನೆರವಾಗಬೇಕು’ ಎಂದು ಮನವಿ ಸಲ್ಲಿಸಿ ಆಹ್ವಾನಿಸಿದರು. ಕೆಲವೇ ಮನೆಗಳನ್ನಾರೂ ವೀಕ್ಷಿಸುವಂತೆ ಕೋರಿದರು.

ಪ್ರತಿಕ್ರಿಯಿಸಿದ ಸಚಿವರು, ‘ಒಂದು ಮನೆ ನೋಡಿದರೆ ಬೇರೆಯವರು ಬೇಸರ ಮಾಡಿಕೊಳ್ಳುತ್ತಾರೆ. ಎಲ್ಲೆಲ್ಲಿ ಮನೆಗಳು ಶಿಥಿಲಾವಸ್ಥೆಗೆ ತಲುಪಿವೆ ಎಂಬ ಬಗ್ಗೆ ಸಮೀಕ್ಷೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅವರು ಬಂದು ನೋಡುತ್ತಾರೆ. ಪರ್ಯಾಯ ವ್ಯವಸ್ಥೆಗೆ ಕ್ರಮ ವಹಿಸುತ್ತಾರೆ. ದುರಸ್ತಿಗೂ ಅನುಕೂಲ ಕಲ್ಪಿಸುತ್ತಾರೆ’ ಎಂದು ಭರವಸೆ ನೀಡಿದರು.

‘ಸ್ಮಶಾನಕ್ಕೆ ಸಮರ್ಪಕ ಜಾಗ ಒದಗಿಸಬೇಕು. ಕೆರೆಯ ಜಾಗವನ್ನಾದರೂ ಕೊಡಿಸಬೇಕು’ ಎಂಬ ಸ್ಥಳೀಯರ ಒತ್ತಾಯಕ್ಕೆ, ‘ಹಾಗೆಲ್ಲ ಕೆರೆಯ ಜಾಗ ಕೊಡಲಾಗುವುದಿಲ್ಲ. ಅದಕ್ಕೆ ಸುಪ್ರೀಂ ಕೋರ್ಟ್‌ ಆದೇಶ ಅಡ್ಡಿಯಾಗುತ್ತದೆ. ಹೀಗಾಗಿ, ಗ್ರಾಮದಲ್ಲಿ ಯಾರಾದರೂ ಒಂದು ಎಕರೆ ಜಮೀನು ಕೊಡಲು ಸಿದ್ಧವಿದ್ದರೆ ತಿಳಿಸಿರಿ. ಕೂಡಲೇ ಖರೀದಿಸಿ, ಸ್ಮಶಾನ ಅಭಿವೃದ್ಧಿಪಡಿಸಿಕೊಡುವುದಕ್ಕೆ ಸಿದ್ಧವಿದ್ದೇವೆ’ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಜಿ.ಪಂ. ಸಿಇಒ ಎಚ್‌.ವಿ. ದರ್ಶನ್, ಉಪ ವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ, ಗ್ರಾಮದ ಮುಖಂಡರೂ ಆಗಿರುವ ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಜೇಂದ್ರ ಅಂಕಲಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT