ಬಲಿಪಾಢ್ಯಮಿಯಂದು ಎಮ್ಮೆಗಳ ಮೆರವಣಿಗೆ ನಡೆಯುವುದು ಸಾಮಾನ್ಯ. ವಿವಿಧ ಪ್ರದೇಶದ ಜನರು ತಮ್ಮ ಎಮ್ಮೆಗಳನ್ನು ಸಿಂಗರಿಸಿ, ಅವುಗಳನ್ನು ಮೆರವಣಿಗೆಯಲ್ಲಿ ಸರ್ದಾರ್ ಮೈದಾನಕ್ಕೆ ತಂದಿದ್ದರು. ಇದನ್ನು ವೀಕ್ಷಿಸಲು ನೂರಾರು ಮಂದಿ ಭಾಗವಹಿಸಿದ್ದರು. ಈ ಸಂದರ್ಭ ಕೆಲವು ಯುವಕರು ಕನ್ನಡ ಧ್ವಜ ಹಾಗೂ ಕೆಲವರು ಭಗವಾಧ್ವಜ ಹಾರಿಸುತ್ತಿದ್ದರು. ಈ ವಿಚಾರವಾಗಿ ತಳ್ಳಾಟ, ನೂಕಾಟ ನಡೆಯಿತು. ಗಲಾಟೆಯೂ ಆಯಿತು. ಸ್ಥಳದಲ್ಲಿದ್ದ ಪೊಲೀಸರು ಮಧ್ಯಪ್ರವೇಶಿಸಿ, ಗುಂಪು ಚದುರಿಸಿದರು. ಇದಾದ ನಂತರ ಎರಡು ಗುಂಪುಗಳ ನಡುವೆ ಕಲ್ಲು ತೂರಾಟ ನಡೆಯಿತು. ಈ ವೇಳೆ, ಪೊಲೀಸರು ಲಘು ಲಾಠಿಪ್ರಹಾರ ನಡೆಸಿ, ಪರಿಸ್ಥಿತಿ ಹತೋಟಿಗೆ ತಂದರು. ನೆರೆದಿದ್ದವರು ದಿಕ್ಕಾಪಾಲಾಗಿ ಓಡಿ ಹೋದರು. ಗಲಾಟೆಯಿಂದಾಗಿ ಪ್ರದರ್ಶನವನ್ನು ಮೊಟಕುಗೊಳಿಸಲಾಯಿತು.