‘ಕೋವಿಡ್ ಕಾರಣದಿಂದ ಕಳೆದ ಎರಡು ವರ್ಷ ನಾಡಹಬ್ಬವನ್ನು ಸರಳವಾಗಿ ಆಚರಿಸಲಾಗಿತ್ತು. ಈ ಬಾರಿ ಕೋವಿಡ್ ಭೀತಿ ಕಡಿಮೆಯಾಗಿದೆ. ಹೀಗಾಗಿ, ಸರ್ಕಾರ ಅನುಮತಿ ಕೊಡಲಿ ಅಥವಾ ಕೊಡದಿರಲಿ ಅದ್ಧೂರಿಯಾಗಿ ರಾಜ್ಯೋತ್ಸವ ಆಚರಿಸಲಾಗುವುದು; ಮೆರವಣಿಗೆಯನ್ನೂ ನಡೆಸಲಾಗುವುದು. ಸ್ತಬ್ಧಚಿತ್ರಗಳು ಹಾಗೂ ರೂಪಕಗಳು ಕೂಡ ಮೆರವಣಿಗೆಯಲ್ಲಿ ಭಾಗವಹಿಸಲಿವೆ’ ಎಂದು ಕನ್ನಡ ಪರ ಸಂಘಟನೆಗಳ ಮುಖಂಡರು ಪ್ರಕಟಿಸಿದ್ದರು. ಆದರೆ, ಪುನೀತ್ ರಾಜ್ಕುಮಾರ್ ಅವರ ನಿಧನದ ಹಿನ್ನೆಲೆಯಲ್ಲಿ ಶೋಕಾಚರಣೆ ಮಾಡುವುದಾಗಿ ತಿಳಿಸಿದ್ದಾರೆ. ಅದ್ಧೂರಿ ಮೆರವಣಿಗೆ ಬದಲಿಗೆ, ಕನ್ನಡ ತಾಯಿ ಭುವನೇಶ್ವರಿ ಫೋಟೊಗೆ ಪೂಜೆ ಸಲ್ಲಿಸಿ ರಾಜ್ಯೋತ್ಸವವನ್ನು ಸರಳವಾಗಿ ಆಚರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಅಲ್ಲಲ್ಲಿ, ವಿವಿಧ ಸಂಘಟನೆಗಳವರು ಮುನ್ನಾದಿನವಾದ ಭಾನುವಾರ ಕನ್ನಡ ಬಾವುಟಗಳನ್ನು ಕಟ್ಟಿದ್ದು ಕನ್ನಡಮಯ ವಾತಾವರಣ ನಿರ್ಮಾಣವಾಗಿದೆ.