ಬೆಳಗಾವಿ: ಜಿಲ್ಲೆಯ ಗಡಿಯಲ್ಲಿರುವ ಕಾಗವಾಡ ತಾಲ್ಲೂಕಿನ ಮಂಗಸೂಳಿ ಗ್ರಾಮದಲ್ಲಿ ಎಂಇಎಸ್ ಮುಖಂಡರು ಈ ಬಾರಿ ಕರಾಳ ದಿನಾಚರಣೆ ನಡೆಸಲು ಪೊಲೀಸರು ಅವಕಾಶ ನೀಡಲಿಲ್ಲ.
ತಾಲ್ಲೂಕು ಆಡಳಿತ ಮತ್ತು ಪೋಲೀಸರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರಿಂದಾಗಿ, ಕನ್ನಡಿಗರು ಭಾನುವಾರ ತಮ್ಮ ಅಂಗಡಿಗಳನ್ನು ತೆರೆದು ವಹಿವಾಟು ನಡೆಸಿದ್ದಾರೆ. ಅಂಗಡಿಗಳ ಎದುರು ರಂಗೋಲಿ ಬಿಡಿಸಿ ಶುಭ ಕೋರುವ ಮೂಲಕ ರಾಜ್ಯೋತ್ಸವವನ್ನು ಆಚರಿಸಿದ್ದಾರೆ.
ಎಸ್ಪಿ ಲಕ್ಷ್ಮಣ ನಿಂಬರಗಿ ನಿರ್ದೇಶನದ ಮೇರೆಗೆ ಅಥಣಿ ಸಿಪಿಐ ಶಂಕರಗೌಡ ಪಾಟೀಲ ಮತ್ತು ಕಾಗವಾಡ ತಹಶೀಲ್ದಾರ್ ಪ್ರಮೀಳಾ ದೇಶಪಾಂಡೆ ಗ್ರಾಮಕ್ಕೆ ತೆರಳಿ ಕರಾಳ ದಿನ ಆಚರಿಸದಂತೆ ಎಂಇಎಸ್ ಮುಖಂಡರಿಗೆ ಎಚ್ಚರಿಕೆ ನೀಡಿದ್ದರು. ಅಂಗಡಿಗಳನ್ನು ತೆರೆದು ಎಂದಿನಂತೆ ವ್ಯವಹಾರ ನಡೆಸುವಂತೆ ವ್ಯಾಪಾರಿಗಳಿಗೆ ಧೈರ್ಯ ತುಂಬಿದ್ದರು.
‘ಅಲ್ಲಿನ ತಾಲ್ಲೂಕು ಆಡಳಿತ ಹಾಗೂ ಪೊಲೀಸರ ಕ್ರಮ ಶ್ಲಾಘನೀಯವಾಗಿದೆ’ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ತಿಳಿಸಿದ್ದಾರೆ.