ಬೆಳಗಾವಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬೆಳಗಾವಿ ವಿಭಾಗದಿಂದ, ಸಾರ್ವಜನಿಕರಿಗಾಗಿ ಒಂದು ದಿನದ ವಿಶೇಷ ಟೂರ್ ಪ್ಯಾಕೇಜ್ ಅಡಿ ವಿಶೇಷ ಬಸ್ಗಳನ್ನು ಓಡಿಒಸಲಾಗುತ್ತಿದೆ. ಆದರೆ, ಈ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶವಿಲ್ಲ.
ಮಳೆಗಾಲದ ಪ್ರವಾಸಕ್ಕಾಗಿ ಈಗಾಗಲೇ ಆರಂಭಿಸಿದ ಒಂದು ದಿನದ ವಿಶೇಷ ಬಸ್ಗಳಿಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಈ ವ್ಯವಸ್ಥೆಯನ್ನು ಬೇರೆ ಸ್ಥಳಗಳಿಗೂ ವಿಸ್ತರಿಸುವಂತೆ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಬೆಳಗಾವಿಯಿಂದ ಮತ್ತಷ್ಟು ಸೌಲಭ್ಯ ಕಲ್ಪಿಸಲಾಗಿದೆ.
ಪ್ರತಿ ಭಾನುವಾರ, 2ನೇ ಮತ್ತು 4ನೇ ಶನಿವಾರ ಹಾಗೂ ಸಾರ್ವಜನಿಕ ರಜಾ ದಿನಗಳಂದು ಈ ವಿಶೇಷ ಬಸ್ಸುಗಳ ಸೇವೆ ಲಭ್ಯವಿದೆ.
ಕೊಲ್ಹಾಪುರದ ಮಹಾಲಕ್ಷ್ಮಿ ದೇವಸ್ಥಾನಕ್ಕೆ ವೋಲ್ವೋ ಎಸಿ ಬಸ್ ಬೆಳಿಗ್ಗೆ 8ಕ್ಕೆ ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಿಂದ ಹೊರಡುತ್ತದೆ. ಮಹಾಲಕ್ಷ್ಮಿ ದೇವಸ್ಥಾನ ಹಾಗೂ ಕ್ಷೇತ್ರ ಕನ್ಹೇರಿ ಮಠದ ದರ್ಶನ ಮುಗಿಸಿಕೊಂಡು ಸಂಜೆ 7.30ಕ್ಕೆ ಹಿಂದಿರುಗುತ್ತದೆ. ಪ್ರಯಾಣ ದರ ₹600.
ದಾಂಡೇಲಿ ವೇಗದೂತ ಬಸ್ ಬೆಳಿಗ್ಗೆ 7.30ಕ್ಕೆ ಹೊರಡುತ್ತದೆ. ಕಕ್ಕೇರಿ ಬಿಷ್ಟಾದೇವಿ ದೇವಸ್ಥಾನ, ದಾಂಡೇಲಿ ಮೊಸಳೆ ಪಾರ್ಕ್, ಮೌಳಂಗಿ ಪಾರ್ಕ್, ಕೂಳಗಿ ನೇಚರ್ ಪಾರ್ಕ್ ವೀಕ್ಷಣೆ ಮುಗಿಸಿಕೊಂಡು ಸಂಜೆ 7.45 ಕ್ಕೆ ಹಿಂದಿರುತ್ತದೆ. ಪ್ರಯಾಣ ದರ ₹360.
ನವಿಲು ತೀರ್ಥ ಡ್ಯಾಮ್: ಬೆಳಗಾವಿಯಿಂದ ವೇಗದೂತ ಬಸ್ ಬೆಳಿಗ್ಗೆ 7.45ಕ್ಕೆ ಹೊರಡುತ್ತದೆ. ಗಂಗಾಂಬಿಕ ಐಕ್ಯ ಸ್ಥಳ, ಎಂ.ಕೆ.ಹುಬ್ಬಳ್ಳಿಯ ಅಶ್ವತ್ಥ ಲಕ್ಷ್ಮೀನಾರಾಯಣ ಸ್ವಾಮಿ ದೇವಸ್ಥಾನ, ಕಿತ್ತೂರು ರಾಣಿ ಚನ್ನಮ್ಮನ ಕೋಟೆ, ಸೊಗಲ ಸೋಮೇಶ್ವರ ದೇವಸ್ಥಾನ ಹಾಗೂ ಮುನವಳ್ಳಿ ನವಿಲುತೀರ್ಥ ಅಣೆಕಟ್ಟೆ ವೀಕ್ಷಣೆ ಮುಗಿಸಿಕೊಂಡು ಸಂಜೆ 7.15ಕ್ಕೆ ಹಿಂದಿರುಗುತ್ತದೆ. ಪ್ರಯಾಣ ದರ ₹350.
ಮಹಿಪಾಲಘಡಕ್ಕೆ ವೇಗದೂತ ಬಸ್ ಬೆಳಿಗ್ಗೆ 7.45ಕ್ಕೆ ಹೊರಡುತ್ತದೆ. ಬೆಳಗಾವಿಯ ರಾಜಹಂಸಘಡ, ಬೆಳಗುಂದಿಯ ಸಿದ್ದೇಶ್ವರ ಸ್ವಾಮಿ ವಿಶ್ರಾಂತ ಆಶ್ರಮ, ರಕ್ಕಸಕೊಪ್ಪ ಜಲಾಶಯ, ಧಾಮಣಿ ಫಾಲ್ಸ್, ನೇಚರ್ ಕ್ಯಾಂಪ್ ಹಾಗೂ ಮಹಿಪಾಲಘಡದ ವೈಜನಾಥ ದೇವಸ್ಥಾನ ವೀಕ್ಷಣೆ ಮುಗಿಸಿಕೊಂಡು ಸಂಜೆ 5.30ಕ್ಕೆ ಹಿಂದಿರುತ್ತದೆ. ಪ್ರಯಾಣದರ ₹200.
ಬದಾಮಿಗೆ ವೇಗದೋತ ಬಸ್ ಬೆಳಿಗ್ಗೆ 8ಕ್ಕೆ ಹೊರಡುತ್ತದೆ. ಗೊಡಚಿ ವೀರಭದ್ರೇಶ್ವರ ದೇವಸ್ಥಾನ, ಬದಾಮಿಯ ಮೇಣ ಬಸದಿ, ಗುಹಾಂತರ ದೇವಾಲಯಗಳು, ಬನಶಂಕರಿ ದೇವಸ್ಥಾನ ಹಾಗೂ ಶಿವಯೋಗ ಮಂದಿರ ವೀಕ್ಷಣೆ ಮುಗಿಸಿಕೊಂಡು ಸಂಜೆ 5.15ಕ್ಕೆ ಹಿಂದಿರುಗುತ್ತದೆ. ಪ್ರಯಾಣದರ ₹270.
ಕಕ್ಕೇರಿಗೆ ವೇಗದೂತ ಬಸ್ ಬೆಳಿಗ್ಗೆ 7.45 ಕ್ಕೆ ಹೊರಡುತ್ತದೆ. ಬೆಳಗಾವಿಯ ರಾಜಹಂಸ ಘಡ, ಅಸೋಗಾ ಹೊಳೆದಂಡೆ, ನಂದಗಡ ಸಂಗೊಳ್ಳಿ ರಾಯಣ್ಣನ ಸಮಾಧಿ, ಹಲಸಿ ಭೂ ವರಹಾ ಲಕ್ಷ್ಮಿ ನರಸಿಂಹ ದೇವಸ್ಥಾನ ಹಾಗೂ ಕಕ್ಕೇರಿ ಬಿಷ್ಟಾದೇವಿ ದೇವಸ್ಥಾನ ವೀಕ್ಷಣೆ ಮುಗಿಸಿಕೊಂಡು ಸಂಜೆ 5.15ಕ್ಕೆ ಹಿಂದಿರುತ್ತದೆ. ಪ್ರಯಾಣ ದರ ₹230.
ಹೆಚ್ಚಿನ ಮಾಹಿತಿಗೆ 7760991631 ಅಥವಾ 9945536685 ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಪ್ರೇಕ್ಷಣೀಯ ಸ್ಥಳ ವೀಕ್ಷಿಸುವವರಿಗೆ ಇನ್ನಷ್ಟು ಸೌಕರ್ಯ ಹೆಚ್ಚಿನ ಬಸ್ ಓಡಿಸಲು ಸಂಸ್ಥೆ ನಿರ್ಧಾರ ಮಹಿಳೆಯರಿಗೆ ಇಲ್ಲ ಉಚಿತ ಪ್ರಯಾಣ
ಬೆಳಗಾವಿ ನಗರದಲ್ಲೂ ಪ್ರವಾಸ ನಗರ ಸಾರಿಗೆ ಬಸ್ ಬೆಳಿಗೆ 8.45ಕ್ಕೆ ಕೇಂದ್ರ ಬಸ್ ನಿಲ್ದಾಣದಿಂದ ಹೊರಡುತ್ತದೆ.
ಬೆಳಗಾವಿ ರಾಜಹಂಸಾಗಡ ಮಿಲಿಟರಿ ಮಹಾದೇವ ದೇವಸ್ಥಾನ ಕಿತ್ತೂರು ರಾಣಿ ಚನ್ನಮ್ಮ ಮೃಗಾಲಯ ಹಾಗೂ ಹುಚೇವಾರಿ ಮಠ ರೇವಣಸಿದ್ದೇಶ್ವರ ಮಂದಿರ ವೀಕ್ಷಣೆ ಮುಗಿಸಿಕೊಂಡು ಸಂಜೆ 5.45ಕ್ಕೆ ಹಿಂದಿರುತ್ತದೆ. ಪ್ರಯಾಣದರ ₹150.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.