ಬೆಳಗಾವಿ: ‘ಕಾಂಗ್ರೆಸ್ ಪಕ್ಷ ಜನಪರವಾದ ಯೋಜನೆಗಳನ್ನ ಕೊಟ್ಟಿದೆ. ಆದರೆ, ಬಿಜೆಪಿ ಬರೀ ಅದಾನಿ, ಅಂಬಾನಿಯವರ ಬಗ್ಗೆ ವಿಚಾರ ಮಾಡುತ್ತದೆ. ಯಾವ ಪಕ್ಷಕ್ಕೆ ಮತ ಹಾಕಿದರೆ ಒಳ್ಳೆಯದು ಎಂದು ಯೋಚಿಸಿ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.
ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಭಾಳಕರ ಪರ ನಗರದ ವಿವಿಧೆಡೆ ಶುಕ್ರವಾರ ಸಂಜೆ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್ ಹೃದಯದಿಂದ ಜನರ ಕೆಲಸ ಮಾಡುತ್ತದೆ. ಆದರೆ, ಬಿಜೆಪಿಯವರು ಬರೀ ತಲೆಯಿಂದ ಕೆಲಸ ಮಾಡುತ್ತಾರೆ. ಅವರು ಬರೀ ಭಾವನಾತ್ಮಕ ವಿಚಾರ ಮಾತನಾಡುತ್ತಾರೆ. ಕಾಂಗ್ರೆಸ್ ಪಕ್ಷ ಜನರ ಜೀವನ ಕಟ್ಟುವ ವಿಚಾರವಾಗಿ ಮಾತನಾಡುತ್ತದೆ’ ಎಂದರು.
‘ರಸ್ತೆ ಮಾಡಬಹುದು, ಗಟಾರ್ ಮಾಡಬಹುದು. ಆದರೆ, ಗೃಹಲಕ್ಷ್ಮಿಯಂಥ ಜನೋಪಯೋಗಿ ಯೋಜನೆ ಏಕೆ ಕೊಡಬೇಕು? ಜನರೇನು ಈ ಯೋಜನೆಗಳನ್ನು ಕೇಳಿದ್ದರಾ? ಕೊರೊನಾ ನಂತರ ಜನರ ಜೀವನ ಬಹಳ ಕಷ್ಟಕ್ಕೆ ಸಿಲುಕಿತ್ತು. ಹಾಗಾಗಿ ಸ್ವಲ್ಪವಾದರೂ ನೆಮ್ಮದಿ ಸಿಗಲಿ ಎಂದು ಇಂತಹ ಯೋಜನೆ ತಂದೆವು. ಮೋದಿ ಸರ್ಕಾರ ಕಳೆದ 10 ವರ್ಷಗಳಲ್ಲಿ ಇಂತಹ ಜನಪರ ಯೋಜನೆ ಜಾರಿಗೆ ತರಲೇ ಇಲ್ಲ’ ಎಂದು ಕಿಡಿಕಾರಿದರು.
ನೆಹರೂ ನಗರ, ಪೌರ ಕಾರ್ಮಿಕರ ಸಂಘದ ಸಭೆ, ಸದಾಶಿವ ನಗರ, ಅಂಬೇಡ್ಕರ್ ನಗರ, ಶಿವಬಸವ ನಗರ, ರಾಮತೀರ್ಥ ನಗರ, ಕಣಬರ್ಗಿ ಮೊದಲಾದ ಪ್ರದೇಶದಲ್ಲಿ ಪ್ರಚಾರ ನಡೆಯಿತು.