ಚಿಕ್ಕೋಡಿ: ‘ಕಾಂಗ್ರೆಸ್ ಪಕ್ಷವು ಸದಾ ದಲಿತ ಸಮುದಾಯವನ್ನು ತನ್ನ ರಾಜಕೀಯಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿದೆ ವಿನಃ ಅಭಿವೃದ್ಧಿ ಮಾಡುವ ಗೋಜಿಗೆ ಹೋಗಿಲ್ಲ. ರಾಜಕೀಯದಲ್ಲಿ ವಂಶಾಡಳಿತ ತಂದು ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವ ಕೆಲಸ ಮಾಡುತ್ತಿದೆ’ ಎಂದು ವಂಚಿತ ಬಹುಜನ ಅಘಾಡಿ ಸಂಸ್ಥಾಪಕ ಪ್ರಕಾಶ ಅಂಬೇಡ್ಕರ್ ಹೇಳಿದರು.
ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಶಂಭು ಕಲ್ಲೋಳಕರ ಪರವಾಗಿ ಪಟ್ಟಣದಲ್ಲಿ ಭಾನುವಾರ ನಡೆದ ಸ್ವಾಭಿಮಾನಿ ಸಮಾವೇಶದಲ್ಲಿ ಮಾತನಾಡಿದ ಅವರು, ‘ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಕೇಂದ್ರದ ಮಾಜಿ ಸಚಿವ ಬಿ.ಶಂಕರಾನಂದ ನಂತರ ಇಲ್ಲಿಯವರೆಗೆ ಪರಿಶಿಷ್ಟ ಜಾತಿ ಸಮುದಾಯದ ಅಭ್ಯರ್ಥಿ ಸ್ಪರ್ಧಿಸಿಲ್ಲ. ಹಲವು ವರ್ಷಗಳ ನಂತರ ಶಂಭು ಕಲ್ಲೋಳಕರ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಅವರಿಗೆ ದಲಿತ ಸಮುದಾಯ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು ಸೇರಿದಂತೆ ಬಹುಜನರು ಬೆಂಬಲ ನೀಡಿ ಆಯ್ಕೆ ಮಾಡಿ’ ಎಂದು ಕೋರಿದರು.
ಅಭ್ಯರ್ಥಿ ಶಂಭು ಕಲ್ಲೋಳಕರ ಮಾತನಾಡಿ, ‘ಅಂಬೇಡ್ಕರ್ ಕುಟುಂಬದ ಜೊತೆಗೆ ನಮ್ಮ ಕುಟುಂಬ ಅವಿನಾಭಾವ ಸಂಬಂಧ ಇಟ್ಟುಕೊಂಡಿದೆ. ನಮ್ಮಲ್ಲಿ ಅಂಬೇಡ್ಕರ್ ರಕ್ತ ಹರಿಯುತ್ತಿದೆ. ಬುದ್ಧ, ಬಸವ, ಅಂಬೇಡ್ಕರ್ ಹೆಸರಿನ ಮೇಲೆ ಡೋಂಗಿತನ ರಾಜಕಾರಣ ಮಾಡುವ ವ್ಯಕ್ತಿಗಳಿಂದ ದೂರ ಇರಬೇಕಾಗಿದೆ’ ಎಂದು ಪರೋಕ್ಷವಾಗಿ ಸಚಿವ ಸತೀಶ ಜಾರಕಿಹೊಳಿ ವಿರುದ್ಧ ಹರಿ ಹಾಯ್ದರು.
‘ಚಿಕ್ಕೋಡಿ ಕ್ಷೇತ್ರದಲ್ಲಿ ಸಾಮಾನ್ಯ ಜನರೊಂದಿಗೆ ನಿಟಕ ಸಂಪರ್ಕ ಹೊಂದಿರುವ ಹಾಗೂ ಅಭಿವೃದ್ಧಿಗೆ ಒತ್ತು ನೀಡುವ ನನಗೆ ಆಶೀರ್ವಾದ ಮಾಡಿ. ಐದು ವರ್ಷಗಳ ಕಾಲ ನಿಮ್ಮ ಸೇವಕನಾಗಿ ಕೆಲಸ ಮಾಡುತ್ತೇನೆ. ಕ್ಷೇತ್ರದಲ್ಲಿ ಔದ್ಯೋಗಿಕರಣ, ಚಿಕ್ಕೋಡಿ ಜಿಲ್ಲಾ ಘೋಷಣೆಗೆ ಪ್ರಯತ್ನ, ಯುವಕರಿಗೆ ಉದ್ಯೋಗ, ಶಾಲಾ ಕಾಲೇಜುಗಳ ಸ್ಥಾಪನೆ, ನೀರಾವರಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡುತ್ತೇನೆ’ ಎಂದು ಭರವಸೆ ನೀಡಿದರು.
ಪಕ್ಷದ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಚೂನಪ್ಪ ಪೂಜಾರಿ, ಈರಗೌಡ ಪಾಟೀಲ, ಧುಳಗೌಡ ಪಾಟೀಲ, ಸುದರ್ಶನ ತಮ್ಮಣ್ಣವರ, ಮಹಾದೇವ ಮನ್ನೋಳಿಕರ, ನಿರಂಜನ ಕಾಂಬಳೆ, ಅಪ್ಪಾಸಾಹೇಬ ಬ್ಯಾಳಿ, ನಂದಕುಮಾರ ದರಬಾರೆ, ಅಶೋಕ ಮಾಳಗೆ, ಮನೋಹರ ಮಾಳಕರಿ, ರಾಘವೇಂದ್ರ ಸನದಿ, ಸಂದೀಪ ಭೋಸಲೆ, ಸುರೇಶ ಬ್ಯಾಕೂಡೆ, ರಾಜು ತಳವಾರ, ರಾವಸಾಹೇಬ ಪಕೀರೆ ಹಲವರು ಇದ್ದರು.