ತೆಲಸಂಗ: ‘ಕೆಪಿಸಿಸಿ ಅಧ್ಯಕ್ಷರು ಹಾಗೂ ಕಾರ್ಯಾಧ್ಯಕ್ಷರ ಪದಗ್ರಹಣದ ನಂತರ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವೈಫಲ್ಯದ ವಿರುದ್ಧ ಹೋರಾಟಕ್ಕೆ ಸನ್ನದ್ಧರಾಗಬೇಕು. ಜನ ವಿರೋಧಿ ನೀತಿ ಖಂಡಿಸಿ ನೊಂದವರಿಗೆ ನ್ಯಾಯ ದೊರಕಿಸಿಕೊಡಲು ಕಾರ್ಯಕರ್ತರು ಈ ಕಾರ್ಯಕ್ರಮದ ಮೂಲಕ ಹೊಸ ಚೈತನ್ಯದೊಂದಿಗೆ ಮುನ್ನಡೆಯಬೇಕು’ ಎಂದು ಅಥಣಿ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಹೇಳಿದರು.
ಜುಲೈ 2ರಂದು ನಡೆಯಲಿರುವ ಪದಗ್ರಹಣ ಕಾರ್ಯಕ್ರಮದ ಅಂಗವಾಗಿ ಗ್ರಾಮದಲ್ಲಿ ನಡೆದ ಜನ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಈ ಸರ್ಕಾರಗಳು ಎಲ್ಲ ರೀತಿಯಲ್ಲೂ ವಿಫಲವಾಗಿವೆ. ಬಡವರು, ರೈತರು, ವ್ಯಾಪಾರಿಗಳು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಆದರೂ ಸರ್ಕಾರ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದೆ. ಸುಳ್ಳು ಭರವಸೆಯೊಂದಿಗೆ ಜನರಿಗೆ ಮೋಸ ಮಾಡುತ್ತಿದೆ. ಇದರ ವಿರುದ್ಧ ಕಾರ್ಯಕರ್ತರು ಹೋರಾಡಬೇಕು’ ಎಂದರು.
ತೆಲಸಂಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಕಾಂತ ಪೂಜಾರಿ, ಮುಖಂಡರಾದ ಅಧ್ಯಕ್ಷ ಕಾಶೀನಾಥ ಕುಂಬಾರಕರ, ಶಿವಾನಂದ ಗುಡ್ಡಾಪೂರ, ಈಶ್ವರ ಉಂಡೋಡಿ, ಸುರೇಶ ಖೊಳಂಬಿ, ಸಿದ್ದು ಕೊಕಟನೂರ, ಧರೆಪ್ಪ ಮಾಳಿ, ರವಿ ಕವಟಗಿ, ಸುರೇಶ ಹುಜರೆ, ಅಪ್ಪು ಜಮಾದರ, ಆಕಾಶ ಬಾಣಿ ಇದ್ದರು.