ಬೆಳಗಾವಿ: ‘ಸಂಕಷ್ಟದಲ್ಲಿರುವವರಿಗೆ ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಸರ್ಕಾರದಿಂದ ಮತ್ತು ವೈಯಕ್ತಿಕವಾಗಿ ಕೂಡ ಸಹಾಯ ಮಾಡುತ್ತಾ ಬಂದಿದ್ದಾರೆ’ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಗುರುನಾಥ ಕಡಬೂರ ಹೇಳಿದರು.
ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಮಾಧ್ಯಮ ಪ್ರತಿನಿಧಿಗಳಿಗೆ ನೀಡಿದ ದಿನಸಿ ಕಿಟ್ಗಳನ್ನು ಇಲ್ಲಿನ ವಾರ್ತಾಭವನದಲ್ಲಿ ಸೋಮವಾರ ವಿತರಿಸಿ ಅವರು ಮಾತನಾಡಿದರು.
‘ಕೋವಿಡ್ ಸಮಯದಲ್ಲಿ ಲಕ್ಷಾಂತರ ಜನರಿಗೆ ತಮ್ಮ ಕುಟುಂಬದ ಸತ್ಯ ಸಂಗಮ ಗ್ರಾಮ ವಿಕಾಸ ಪ್ರತಿಷ್ಠಾನದಿಂದ ನೆರವು ನೀಡುತ್ತಾ, ಜನಪರ ಕಾಳಜಿ ವ್ಯಕ್ತಪಡಿಸಿದ್ದಾರೆ. ಅಥಣಿ, ಬೆಂಗಳೂರು, ಬೆಳಗಾವಿ ರಾಯಚೂರು ಸೇರಿದಂತೆ ವಿವಿಧೆಡೆ ಕಷ್ಟದಲ್ಲಿದ್ದ ಜನರಿಗೆ ಹಾಗೂ ಪತ್ರಕರ್ತರಿಗೆ ಅವರು ನೆರವಾಗಿದ್ದಾರೆ’ ಎಂದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮುಖಂಡ ಶಶಿಕಾಂತ ಸವದಿ, ‘ಕೋವಿಡ್ ಸಂಕಷ್ಟ ಕಾಲದಲ್ಲಿ ಸತ್ಯ ಸಂಗಮ ಗ್ರಾಮ ವಿಕಾಸ ಪ್ರತಿಷ್ಠಾನದಿಂದ ಸಾಧ್ಯವಾದಷ್ಟು ನಿಸ್ವಾರ್ಥ ಜನ ಸೇವೆ ಮಾಡಲಾಗುತ್ತಿದೆ’ ಎಂದು ತಿಳಿಸಿದರು.
ಮುಖಂಡ ಮಹಾಂತೇಶ ವಕ್ಕುಂದ, ‘ಅಥಣಿಯಲ್ಲಿ ಸತ್ಯ ಸಂಗಮ ಪ್ರತಿಷ್ಠಾನದಿಂದ ಸತತ 26 ದಿನಗಳವರೆಗೆ ದಿನಸಿ ಕಿಟ್ಗಳನ್ನು ಈ ಟ್ರಸ್ಟ್ ವಿತರಿಸಿದೆ. ತಿಂಗಳಿಗೆ ಆಗುವಷ್ಟು ಅಗತ್ಯ ಆಹಾರ ಸಾಮಗ್ರಿಗಳನ್ನು ನೀಡಲಾಗಿದೆ. ಇದು ಅಭಿನಂದನಾರ್ಹ’ ಎಂದರು.
200 ಮಂದಿಗೆ ಕಿಟ್ಗಳನ್ನು ವಿತರಿಸಲಾಯಿತು. ಸಂತೋಷ ಸಾವಡ್ಕರ ಹಾಗೂ ಮಾಧ್ಯಮ ಪ್ರತಿನಿಧಿಗಳು ಇದ್ದರು.