ಬೆಳಗಾವಿ: ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜಿಲ್ಲಾ ಕುರಿಗಾಹಿಗಳು ಮತ್ತು ಕುರಿ ಸಾಕಾಣಿಕೆದಾರರ ಸಂಘಗಳು ಮತ್ತು ಸಂಘಗಳ ಮಹಾಮಂಡಳದ ನೇತೃತ್ವದಲ್ಲಿ ಕುರಿಗಾಹಿಗಳು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಕಾಲೇಜು ರಸ್ತೆಯ ಪಶುಸಂಗೋಪನಾ ಇಲಾಖೆ ಕಚೇರಿ ಬಳಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಅವರು, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು.
ಕುರಿಗಳು ಸತ್ತರೆ ಪರಿಹಾರ ನೀಡುವ ಯೋಜನೆ ಮುಂದುವರಿಸಬೇಕು. ಕುರಿಗಳಿಗೆ ಔಷಧ ವಿತರಣೆಗೆ ಕ್ರಮ ಕೈಗೊಳ್ಳಬೇಕು. ಗೋಮಾಳ ರಕ್ಷಣೆ ಮಾಡಬೇಕು. ಕುರಿಗಳಿಗೆ ನೀರು, ಮೇವು ಹಾಗೂ ವಿಮಾ ಸೌಲಭ್ಯ ಕಲ್ಪಿಸಬೇಕು. ಹಿಂದೆ ಜಾರಿಗೊಳಿಸಿದ್ದ ಈ ಯೋಜನೆಗಳನ್ನು ಮುಂದುವರಿಸಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ಸಹಕಾರ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಸಂಘಗಳ ಮಹಾಮಂಡಳದ ಅಧ್ಯಕ್ಷ ಪಂಡಿತರಾವ್ ಚಿದ್ರಿ ಹಾಗೂ ನಿರ್ದೇಶಕ ಗಜಾನನ ಎನ್. ಕ್ವಳ್ಳಿ ನೇತೃತ್ವ ವಹಿಸಿದ್ದರು.