ಬೆಳಗಾವಿ: ಈಚೆಗೆ ನಿಧನರಾದ ಚೇತನ ಕುಲಕರ್ಣಿ ಅವರ ಕುಟುಂಬದವರಿಗೆ ಧನ ಸಹಾಯ ನೀಡುವಂತೆ ಆಗ್ರಹಿಸಿ ಬೆಳಗಾವಿ ಪತ್ರಿಕಾ ಛಾಯಾಗ್ರಾಹಕರ ಸಂಘ ಮತ್ತು ಕಾರ್ಯನಿರತ ಪತ್ರಕರ್ತರ ಸಂಘದ ಪರವಾಗಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.
‘ಚೇತನ 30 ವರ್ಷಗಳಿಂದ ರಾಜ್ಯಮಟ್ಟದ ವಿವಿಧ ಪತ್ರಿಕೆಗಳ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದರು. ಒಂದು ವರ್ಷ ಅನಾರೋಗ್ಯಕ್ಕೀಡಾಗಿ, ಜುಲೈ 22ರಂದು ಅಕಾಲಿಕ ನಿಧನರಾದರು. ಅವರಿಗೆ ತಾಯಿ, ಪತ್ನಿ ಹಾಗೂ ಇಬ್ಬರು ಪುತ್ರರು ಇದ್ದಾರೆ. ಆಧಾರ ಸ್ತಂಭವನ್ನೇ ಕಳೆದುಕೊಂಡು ಆ ಕುಟುಂಬ ಸಂಕಷ್ಟದಲ್ಲಿದೆ. ಹೀಗಾಗಿ ಜಿಲ್ಲಾಡಳಿತ ಅಥವಾ ಮಹಾನಗರ ಪಾಲಿಕೆಯಿಂದ ಧನಸಹಾಯ ನೀಡಬೇಕು’ ಎಂದು ಆಗ್ರಹಿಸಿದರು.
‘ಪತ್ರಿಕೆಯಲ್ಲಿ 10 ವರ್ಷ ಕೆಲಸ ಮಾಡಿದ ಛಾಯಾಗ್ರಾಹಕರಿಗೆ ಮಾನ್ಯತಾ ಪತ್ರ, ಪಿಂಚಣಿ ಸೌಲಭ್ಯ, ಉಚಿತ ನಿವೇಶನ ಸೇರಿ ಅಗತ್ಯ ಸೌಲಭ್ಯ ಒದಗಿಸಬೇಕು’ ಎಂದು ಆಗ್ರಹಿಸಿದರು.
ಸಂಘದ ಅಧ್ಯಕ್ಷ ಸದಾಶಿವ ಸಂಕಪ್ಪಗೊಳ, ಉಪಾಧ್ಯಕ್ಷ ಏಕನಾಥ ಅಗಸಿಮನಿ, ಸದಸ್ಯರಾದ ಅರುಣ ಯಳ್ಳೂರಕರ, ವಿಜಯ ಮೋಹಿತೆ, ಜಗದೀಶ ದೊಡ್ಡಿಕರ, ಮಂಜುನಾಥ ಕೋಳಿಗುಡ್ಡ, ಕೃಷ್ಣ ಕಾಂಬಳೆ, ವಿಶ್ವನಾಥ ದೇಸಾಯಿ, ಗಜಾನನ ಮುಚ್ಚಂಡಿಕರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.