ತೆಲಸಂಗ: ‘ಕಾಲ ಮಾನಕ್ಕೆ ತಕ್ಕಂತೆ ಬೇಸಾಯ ಮಾಡದೆ ಇರುವುದರಿಂದ ಕೃಷಿ ಕ್ಷೇತ್ರ ಬಡವಾಗುತ್ತಿದೆ. ತಜ್ಞರ ಸಲಹೆ ಅನುಸರಿಸಿ ಹೆಚ್ಚಿನ ಪ್ರಯೋಜನ ಪಡೆದುಕೊಳ್ಳಬೇಕು’ ಎಂದು ಜಂಟಿ ಕೃಷಿ ನಿರ್ದೇಶಕ ಶಿವನಗೌಡ ಎಸ್. ಪಾಟೀಲ ಸಲಹೆ ನೀಡಿದರು.
ಇಲ್ಲಿನ ರೈತ ಸಂಪರ್ಕ ಕೇಂದ್ರದಲ್ಲಿ ಬುಧವಾರ ಏರ್ಪಡಿಸಿದ್ದ ರೈತರಿಗಾಗಿ ಹಿಂಗಾರು ಬೆಳೆಗಳ ತಾಂತ್ರಿಕತೆ ಅಂದೋಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಜೋಳ ಬೆಳೆಯ ಸುಧಾರಿತ ಬೇಸಾಯ ಕ್ರಮಗಳನ್ನು ಅನುಸರಿಸಬೇಕು. ಗಂಧಕ ಬೀಜೋಪಚಾರದ ಪೂರ್ವದಲ್ಲಿ ಪ್ರತಿ ಕಿ.ಗ್ರಾಂ. ಬೀಜವನ್ನು 1.5 ಲೀ. ನೀರಿನಲ್ಲಿ 30 ಗ್ರಾಂ. ಕ್ಯಾಲ್ಸಿಯಂ ಕ್ಲೋರೈಡ್ ಬೆರೆಸಿದ ಅಥವಾ ಗೋಮೂತ್ರ ಬೆರೆಸಿದ ದ್ರಾವಣದಲ್ಲಿ 8 ಗಂಟೆಗಳ ಕಾಲ ನೆನೆಸಿ ನೆರಳಿನಲ್ಲಿ ಆರಿಸಿ ಬಿತ್ತುವುದರಿಂದ ಮೊಳಕೆ ಹಾಗೂ ಸಸಿಗಳ ಬೆಳವಣಿಗೆ ಸುಧಾರಿಸಿ ಇಳುವರಿ ಹೆಚ್ಚಾಗುತ್ತದೆ. ₹ 50 ವೆಚ್ಚದಲ್ಲಿ ಬೀಜೋಪಚಾರ ಮಾಡದೆ ಬಿತ್ತನೆ ಮಾಡಿದರೆ ಮುಂದೆ ₹ 500 ಕೊಟ್ಟು ಔಷಧಿ ಸಿಂಪಡಿಸಬೇಕಾಗುತ್ತದೆ’ ಎಂದು ತಿಳಿಸಿದರು.
‘ಸಮಗ್ರ ಅಧ್ಯಯನ, ಜ್ಞಾನದ ಕೊರತೆಯಿಂದ ತೊಂದರೆ ಉಂಟಾಗುತ್ತದೆ. ಸಣ್ಣ ಸಣ್ಣ ತಪ್ಪುಗಳೆ ರೈತನನ್ನು ಕಷ್ಟಕ್ಕೆ ದೂಡುತ್ತಿದ್ದು, ಎಚ್ಚರ ವಹಿಸದೆ ಇದ್ದಲ್ಲಿ ಸೂಜಿಯಿಂದ ಆಗುವುದನ್ನು ಕೊಡ್ಲಿಯಿಂದ ತೆಗೆಯಬೇಕಾಗುತ್ತದೆ. ಸುಧಾರಿತ ಬೇಸಾಯದ ಕ್ರಮಗಳನ್ನು ಅನುಸರಿಸಬೇಕು’ ಎಂದು ಹೇಳಿದರು.
ಕೃಷಿ ಮಹಾವಿದ್ಯಾಲಯ ವಿಜ್ಞಾನಿ ಬಿ.ಕೆ. ಅಟೋನಿ, ‘ರೋಗ ಮತ್ತು ಕೀಟಗಳ ಲಕ್ಷಣಗಳು ಕಂಡು ಬಂದಾಗ ಮಾತ್ರ ಸಸ್ಯ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕು. ಪರೀಕ್ಷೆಗೊಳಪಡಿಸದ, ಸರ್ಕಾರದ ಅನುಮತಿ ಹಿಂದಿರದ ಯಾವುದೇ ಔಷಧಿಯನ್ನು ಸಿಂಪಡಿಸಬಾರದು’ ಎಂದು ಸಲಹೆ ನೀಡಿದರು.
ತೆಲಸಂಗ ಕೃಷಿ ಅಧಿಕಾರಿ ಯಂಕಪ್ಪ ಉಪ್ಪಾರ, ತಾಲ್ಲೂಕು ಪಂಚಾಯಿತಿ ಸದಸ್ಯ ಶ್ರೀಶೈಲ ಶೆಲ್ಲೆಪ್ಪಗೋಳ ಇದ್ದರು.