ಬೆಳಗಾವಿ: ಭಾರತ ಬಿಟ್ಟು ತೊಲಗಿ (ಕ್ವಿಟ್ ಇಂಡಿಯಾ) ಚಳವಳಿಯಲ್ಲಿ ಭಾಗವಹಿಸಿದ್ದ ಇಬ್ಬರು ಸ್ವಾತಂತ್ರ್ಯ ಯೋಧರನ್ನು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮಂಗಳವಾರ ಸನ್ಮಾನಿಸಿದರು.
ಕ್ವಿಟ್ ಇಂಡಿಯಾ ಚಳವಳಿಗೆ 80 ವರ್ಷಗಳು ಪೂರ್ಣಗೊಂಡ ಕಾರಣ ಜಿಲ್ಲಾಧಿಕಾರಿ ಸ್ವಾತಂತ್ರ್ಯ ಯೋಧರಾದ ಇಲ್ಲಿನ ಅನಗೋಳದ ರಾಣಿ ಚನ್ನಮ್ಮ ನಗರದ ರಾಜೇಂದ್ರ ಧರ್ಮಪ್ಪ ಕಲಘಟಗಿ ಹಾಗೂ ಕುವೆಂಪು ನಗರದ ವಿಠ್ಠಲ ಯಾಳಗಿ ಅವರ ಮನೆಗಳಿಗೆ ತೆರಳಿ ಜಿಲ್ಲಾಡಳಿತದ ಪರವಾಗಿ ಸನ್ಮಾನಿಸಿದರು.
ಹೋರಾಟದ ದಿನಗಳನ್ನು ಮೆಲುಕು ಹಾಕಿದ ರಾಜೇಂದ್ರ ಕಲಘಟಗಿ, ಕ್ವಿಟ್ ಇಂಡಿಯಾ ಚಳವಳಿಯ ಮುಂಚೂಣಿಯಲ್ಲಿದ್ದ ಮಹಾತ್ಮ ಗಾಂಧೀಜಿ ಅವರು ಇಡೀ ದೇಶಕ್ಕೆ ಪ್ರೇರಣೆಯಾಗಿದ್ದರು ಎಂದರು.
ಜಿಲ್ಲಾಧಿಕಾರಿ, ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ಸ್ವಾತಂತ್ರ್ಯ ಯೋಧರನ್ನು ಭೇಟಿ ಮಾಡಿ ಅವರನ್ನು ಸನ್ಮಾನಿಸುವ ಅವಕಾಶ ದೊರಕಿರುವುದು ತಮ್ಮ ಸೌಭಾಗ್ಯ ಎಂದರು.
ಬೆಳಗಾವಿ ಉಪ ವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ, ತಹಶೀಲ್ದಾರ್ ಆರ್.ಕೆ.ಕುಲಕರ್ಣಿ ಇದ್ದರು.