ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ‘ಸೇವೆ’ ಆರಂಭಿಸದ ಆಸ್ಪತ್ರೆ ಕ್ಯಾಂಟೀನ್‌ಗಳು!

ಜಿಲ್ಲೆಯಲ್ಲಿ 13 ಕಡೆಗಳಲ್ಲಿ ನಿರ್ಮಿಸಲಾಗಿದೆ
Last Updated 4 ಸೆಪ್ಟೆಂಬರ್ 2018, 9:37 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಜಿಲ್ಲಾಸ್ಪತ್ರೆ ಅವರಣ ಸೇರಿದಂತೆ ಜಿಲ್ಲೆಯ 13 ಕಡೆಗಳಲ್ಲಿ ನಿರ್ಮಿಸಲಾಗಿರುವ ನಾಗರಿಕ ಸೌಲಭ್ಯಗಳ ಸಂಕೀರ್ಣಗಳು ಉದ್ಘಾಟನೆ ಭಾಗ್ಯ ಕಂಡಿಲ್ಲ.

ಜಿಲ್ಲಾಸ್ಪತ್ರೆ ಆವರಣ, ಎಲ್ಲ ತಾಲ್ಲೂಕು ಆಸ್ಪತ್ರೆಗಳು ಹಾಗೂ ಮೂಡಲಗಿ, ಯರಗಟ್ಟಿ ಹಾಗೂ ನಿಪ್ಪಾಣಿಯಲ್ಲಿ ತಲಾ ₹ 25 ಲಕ್ಷ ವೆಚ್ಚದಲ್ಲಿ ಈ ಸಂಕೀರ್ಣಗಳನ್ನು ನಿರ್ಮಿಸಲಾಗಿದೆ. ಇವುಗಳು ಬಳಕೆಯಾಗದೇ ಪಾಳು ಬಿದ್ದಿವೆ.

ಸರ್ಕಾರಿ ಆಸ್ಪತ್ರೆಗಳಿಗೆ ಸಾಮಾನ್ಯವಾಗಿ ಬಡವರು ಹಾಗೂ ಮಧ್ಯಮ ವರ್ಗದವರು ಬರುತ್ತಾರೆ. ಅಲ್ಲಿ ಅವರಿಗೆ ರಿಯಾಯಿತಿ ದರದಲ್ಲಿ ಊಟ, ಉಪಾಹಾರ ಒದಗಿಸುವ ಕ್ಯಾಂಟೀನ್‌ಗಳನ್ನು ಆರಂಭಿಸುವ ಉದ್ದೇಶ ಹೊಂದಲಾಗಿದೆ.

ರೋಗಿಗಳು ಹಾಗೂ ಸಂಬಂಧಿಕರಿಗೆ ಹಾಲು (ಹಾಲು ಒಕ್ಕೂಟದಿಂದ ನಂದಿನಿ ಮಿಲ್ಕ್ ಪಾರ್ಲರ್), ಬ್ರೆಡ್‌, ಹಣ್ಣು, ಶುದ್ಧ ಕುಡಿಯುವ ನೀರು ಮೊದಲಾದವುಗಳು ಆಸ್ಪತ್ರೆ ಆವರಣದಲ್ಲಿಯೇ ಸಿಗುವಂತಾಗಲಿ ಎಂಬ ಉದ್ದೇಶದಿಂದ ಹಿಂದಿನ ಸರ್ಕಾರದ ಅವಧಿಯಲ್ಲಿ ಮಳಿಗೆಗಳನ್ನು ಕಟ್ಟಿಸಲಾಗಿದೆ. ಜೆನರಿಕ್‌ ಔಷಧ ಮಳಿಗೆ, ಪುಸ್ತಕ ಮಳಿಗೆ, ಎಸ್‌ಟಿಡಿ ಬೂತ್, ಶೌಚಾಲಯಕ್ಕೂ ವ್ಯವಸ್ಥೆ ಕಲ್ಪಿಸಲಾಗಿದೆ.

ದರ ನಿಗದಿ

ಇಲ್ಲಿ ಕ್ಯಾಂಟೀನ್‌ ನಡೆಸುವವರು ಸರ್ಕಾರ ನಿಗದಿಪಡಿಸಿದ ದರವನ್ನಷ್ಟೇ ವಿಧಿಸಬೇಕು. ಅತ್ಯಂತ ಕಡಿಮೆ ದರಕ್ಕೆ ಊಟ, ಉಪಾಹಾರ ದೊರೆಯುವುದರಿಂದ ಸಾರ್ವಜನಿಕರಿಗೆ ಬಹಳ ಅನುಕೂಲವಾಗುತ್ತದೆ ಎಂದು ಸರ್ಕಾರ ತಿಳಿಸಿತ್ತು.

ನಿರ್ಮಾಣಕ್ಕೆ ತೋರಿದ ಆಸಕ್ತಿಯನ್ನು ಆರೋಗ್ಯ ಇಲಾಖೆಯವರು ಆರಂಭಿಸುವುದಕ್ಕೆ ಪ್ರದರ್ಶಿಸಿಲ್ಲ. ಇದರಿಂದಾಗಿ, ಆಸ್ಪತ್ರೆಗಳಿಗೆ ಬರುವವರು, ದುಬಾರಿ ದರ ವಿಧಿಸುವ ಅಕ್ಕಪಕ್ಕದ ಕ್ಯಾಂಟೀನ್‌ಗಳು ಅಥವಾ ಅಂಗಡಿಗಳನ್ನೇ ಅವಲಂಬಿಸಬೇಕಾಗಿದೆ; ಅಲೆದಾಡಬೇಕಾಗಿದೆ; ತೊಂದರೆ ಅನುಭವಿಸಬೇಕಾಗಿದೆ. ಕೆಲವೆಡೆ, ಆಸ್ಪತ್ರೆ ಆವರಣದಲ್ಲಿಯೇ ಅಂಗಡಿಗಳಿದ್ದು, ಅವರು ಮನಬಂದಂತೆ ದರ ವಿಧಿಸುವುದು ಸಾಮಾನ್ಯವಾಗಿದೆ.

ಕರ್ನಾಟಕ ಆರೋಗ್ಯ ವ್ಯವಸ್ಥೆ ಅಭಿವೃದ್ಧಿ ಹಾಗೂ ಸುಧಾರಣಾ ಯೋಜನೆ (ಕೆಎಚ್‌ಎಸ್‌ಡಿಆರ್‌ಪಿ)ಯಡಿ ಈ ಸಂಕೀರ್ಣಗಳನ್ನು ನಿರ್ಮಿಸಲಾಗಿದೆ. 6ರಿಂದ 8 ತಿಂಗಳ ಹಿಂದೆಯೇ ಎಲ್ಲವನ್ನೂ ಸಂಬಂಧಿಸಿದ ಆಸ್ಪತ್ರೆಗಳಿಗೆ (ಆರೋಗ್ಯ ಇಲಾಖೆಗೆ) ಹಸ್ತಾಂತರಿಸಿದೆ.

ಆದ್ಯತೆ ನೀಡಬೇಕು

ಮಳಿಗೆಗಳಲ್ಲಿನ ಕ್ಯಾಂಟೀನ್‌ಗಳನ್ನು ಗುತ್ತಿಗೆ ನೀಡುವಾಗ ಮಹಿಳಾ ಸ್ವಸಹಾಯ ಸಂಘದವರು, ಅಂಗವಿಕಲರು ಹಾಗೂ ವಿಧವೆಯರಿಗೆ ಆದ್ಯತೆ ಕೊಡಬೇಕು. ನೀರು ಹಾಗೂ ವಿದ್ಯುತ್‌ ಅನ್ನು ಆಯಾ ಆಸ್ಪತ್ರೆಯಿಂದಲೇ ಪೂರೈಸಲಾಗುವುದು. ಎಂಎಸ್‌ಐಎಸ್‌ನಿಂದ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸಲಾಗುವುದು. ಅಕ್ಕಿ, ಗೋಧಿ, ಬೇಳೆ ಮೊದಲಾದ ದಿನಸಿಗಳನ್ನು ಆಹಾರ ಇಲಾಖೆಯಿಂದ ಒದಗಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.

‘ಸರ್ಕಾರದ ಆದೇಶದಂತೆ ಸಂಕೀರ್ಣಗಳನ್ನು ನಿರ್ಮಿಸಿ ಆಯಾ ಆಸ್ಪತ್ರೆಗಳಿಗೆ ಆರು ತಿಂಗಳ ಹಿಂದೆಯೇ ಹಸ್ತಾಂತರಿಸಲಾಗಿದೆ. ಗುತ್ತಿಗೆದಾರರಿಗೆ ಟೆಂಡರ್‌ ಕೊಡುವುದು, ಮಳಿಗೆಗಳನ್ನು ಆರಂಭಿಸುವುದು ಅವರ ವ್ಯಾಪ್ತಿಗೆ ಬರುತ್ತದೆ’ ಎಂದು ಕೆಎಚ್‌ಎಸ್‌ಡಿಆರ್‌ಪಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎನ್. ಶೇಖ್ ‘ಪ್ರಜಾವಾಣಿ’ಗೆ ತಿಳಿಸಿದರು.

ವ್ಯವಸ್ಥೆಗೆ ಕ್ರಮ

ಈ ಬಗ್ಗೆ ಪ್ರತಿಕ್ರಿಯಿಸಿದ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಷಣ್ಮುಖ ಟಿ. ಕಳಸದ, ‘ಜಿಲ್ಲಾಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಜಾಸ್ತಿಯಾಗಿದೆ. ಹೀಗಾಗಿ, ನೋಂದಣಿಗಾಗಿ ಹೆಚ್ಚುವರಿಯಾಗಿ ನಾಲ್ಕು ಕೌಂಟರ್‌ಗಳನ್ನು ತೆರೆಯಲಾಗಿದೆ. ರಿಯಾಯಿತಿ ದರದಲ್ಲಿ ಊಟ, ಉಪಾಹಾರ ದೊರೆಯುವ ಕ್ಯಾಂಟೀನ್‌ ಆರಂಭಿಸಿದರೆ ಹೆಚ್ಚಿನ ಜಾಗ ಬೇಕಾಗುತ್ತದೆ. ಇದಕ್ಕೆ ವ್ಯವಸ್ಥೆ ಮಾಡಿಕೊಳ್ಳುವುದಕ್ಕೆ ಕ್ರಮ ವಹಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಕ್ಲಬ್ ರಸ್ತೆಗೆ ಹೊಂದಿಕೊಂಡಂತೆ, ಜಿಲ್ಲಾಸ್ಪತ್ರೆ ಆವರಣದಲ್ಲಿ ನಿರ್ಮಿಸಿರುವ ‘ಇಂದಿರಾ ಕ್ಯಾಂಟೀನ್’ ಕೂಡ ಉದ್ಘಾಟನೆಗೊಂಡಿಲ್ಲ. ಆಸ್ಪತ್ರೆಯಲ್ಲಿ ಎರಡೂ ಕ್ಯಾಂಟೀನ್‌ಗಳು ಕಾರ್ಯಾರಂಭ ಮಾಡಿದರೆ, ಸಾರ್ವಜನಿಕರಿಗೆ ಅನುಕೂಲವಾಗಿದೆ.

*ಜಿಲ್ಲಾಸ್ಪತ್ರೆಯಲ್ಲಿ ನಿರ್ಮಿಸಿರುವ ನಾಗರಿಕ ಸೌಲಭ್ಯಗಳ ಸಂಕೀರ್ಣದಲ್ಲಿ ಕ್ಯಾಂಟೀನ್‌ ಅನ್ನು ಆರೋಗ್ಯ ಕರ್ನಾಟಕ ಯೋಜನೆ ಜಾರಿಯಾದ ನಂತರ ಆರಂಭಿಸಲು ಉದ್ದೇಶಿಸಲಾಗಿದೆ.
–ಡಾ.ಷಣ್ಮುಖ ಟಿ. ಕಳಸದ, ನಿರ್ದೇಶಕ, ಬಿಮ್ಸ್‌

ಅಂಕಿ ಅಂಶ

* ₹ 25 ಲಕ್ಷ ಸಂಕೀರ್ಣವೊಂದಕ್ಕೆ ಮಾಡಲಾದ ವೆಚ್ಚ

* 13 ಜಿಲ್ಲೆಯಲ್ಲಿ ನಿರ್ಮಿಸಲಾದವು

* 6ರಿಂದ 8 ಹಸ್ತಾಂತರಿಸಿ ಆಗಿರುವ ತಿಂಗಳುಗಳು

* 1,000 ನಿತ್ಯ ಊಟೋಪಚಾರ ಕಲ್ಪಿಸಬೇಕಾದ ಜನರ ಸಂಖ್ಯೆ

* ₹ 4.50 ಒಂದು ಇಡ್ಲಿಗೆ ನಿಗದಿಯಾದ ದರ

* ₹ 9 ಪಲಾವ್‌ ದರ

* ₹ 9 ಪ್ಲೇಟ್ ಅನ್ನ–ಸಾರು

* ₹ 8 ಎರಡು ಚಪಾತಿ ಹಾಗೂ ಪಲ್ಯದ ದರ

ಮುಖ್ಯಾಂಶಗಳು

* ಕಡಿಮೆ ದರದಲ್ಲಿ ಊಟ, ಉಪಹಾರ ನೀಡುವ ಉದ್ದೇಶ

* ಮಿಲ್ಕ್‌ ಪಾರ್ಲರ್, ಹಣ್ಣಿನ ಅಂಗಡಿಗಳಿಗೆ ಅವಕಾಶ

* ಸಿದ್ಧವಾಗಿ, ಹಸ್ತಾಂತರವಾಗಿ ತಿಂಗಳುಗಳೇ ಕಳೆದಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT