ಕೌಜಲಗಿ: ‘ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಆದಾಯ ದ್ವಿಗುಣಗೊಳಿಸಲು ಮುಂದಾಗಿದ್ದಾರೆ. ಇದೂ ಸೇರಿದಂತೆ ಕೃಷಿಕರ ಪರವಾದ ಎಲ್ಲ ಯೋಜನೆಗಳನ್ನು ರಾಜ್ಯದಲ್ಲಿ ಅನುಷ್ಠಾನಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಸಮೀಪದ ಬೆಟಗೇರಿ ಗ್ರಾಮದ ಮಹಾಲಕ್ಷ್ಮಿ ಸೌಹಾರ್ದ ಸಹಕಾರಿ ಶಾಖೆಗೆ ಸೋಮವಾರ ಭೇಟಿ ನೀಡಿದ್ದ ವೇಳೆ ಸಲಹಾ ಸಮಿತಿಯವರಿಂದ ಸತ್ಕಾರ ಸ್ವೀಕರಿಸಿ ಅವರು ಮಾತನಾಡಿದರು.
‘ಸಾಮಾನ್ಯ ರೈತ ಕುಟುಂಬದಿಂದ ಬಂದಿರುವ ನಾನು, ರೈತರ ಸಮಸ್ಯೆಗಳ ಕುರಿತು ಕೇಂದ್ರ ಸರ್ಕಾರದ ಗಮನಸೆಳೆಯುವ ಕೆಲಸ ಮಾಡುತ್ತೇನೆ’ ಎಂದರು.
ಸಮಿತಿಯ ಅಧ್ಯಕ್ಷ ಈರಪ್ಪ ದೇಯಣ್ಣವರ, ಶ್ರೀಕಾಂತ ಕರೆಪ್ಪಗೋಳ, ಮಾಯಪ್ಪ ಬಾಣಸಿ, ರಾಮಪ್ಪ ಮುಧೋಳ, ರಮೇಶ ಬ್ಯಾಗಿ, ವಿಠಲ ಕೋಣಿ, ಈಶ್ವರ ಮುಧೋಳ, ಪರಪ್ಪ ಗಿರೆಣ್ಣವರ, ಮಹಾದೇವ ಇಟ್ನಾಳ, ಗಂಗಯ್ಯ ಹಿರೇಮಠ ಇದ್ದಾರೆ.