ಖಾನಾಪುರ: ತಾಲ್ಲೂಕಿನ ಕಣಕುಂಬಿ ಅಬಕಾರಿ ಠಾಣೆ ವ್ಯಪ್ತಿಯ ಸುರಳಾ ಕ್ರಾಸ್ ಬಳಿ ಗುರುವಾರ ಗೋವಾದಿಂದ ಅಕ್ರಮವಾಗಿ ಮದ್ಯ ಸಾಗಣೆ ಮಾಡುತ್ತಿದ್ದ ಲಾರಿ ವಶಪಡಿಸಿಕೊಂಡ ಅಬಕಾರಿ ಅಧಿಕಾರಿಗಳು, ನಾಲ್ವರನ್ನು ಬಂಧಿಸಿದ್ದಾರೆ.
ಉತ್ತರ ಪ್ರದೇಶ ಮೂಲದ, ಲಾರಿ ಚಾಲಕ ಪ್ರದೀಪಕುಮಾರ ಭಗವತಿ ಪ್ರಸಾದ, ಕ್ಲೀನರ್ ರಾಮಚಂದರ ರಾಮ ನಿಹಾಲ್ ಪಾಸಿ ಪುರವಾ ಬಂಧಿತರು. ಲಾರಿಯಲ್ಲಿದ್ದ 1093.4 ಲೀಟರ್ ಗೋವಾ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ. ₹27.52 ಲಕ್ಷ ಮೌಲ್ಯದ ಮದ್ಯ, ₹25 ಲಕ್ಷ ಮೌಲ್ಯದ ಲಾರಿ ಸೇರಿದಂತೆ ಒಟ್ಟು ₹52.52 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ವೈ.ಮಂಜುನಾಥ, ಜಂಟಿ ಆಯುಕ್ತ ಪಿರೋಜ್ಖಾನ್ ಖಿಲ್ಲೇದಾರ ಆದೇಶದಂತೆ ಉಪ ಆಯುಕ್ತೆ ವನಜಾಕ್ಷಿ ಅವರ ಮಾರ್ಗದರ್ಶನದಲ್ಲಿ ಅಬಕಾರಿ ಎಸ್ಐ ರವಿ ಎಂ. ಮುರಗೋಡ, ನಿರೀಕ್ಷಕರಾದ ಮಂಜುನಾಥ ಗಲಗಲಿ, ಬಾಳಗೌಡ ಪಾಟೀಲ, ದುಂಡಪ್ಪ ಹಕ್ಕಿ ಮತ್ತು ಕಾನ್ಸ್ಟೆಬಲ್ಗಳಾದ ಆರುಣಕುಮಾರ ಬಂಡಿಗಿ, ಮಂಜುನಾಥ ಮಾಸ್ತಮರಡಿ, ಗುಂಡರಾವ್ ಪೂಜೇರಿ, ವಿಠಲ ಕ್ವಾರಿ, ಮಹಾದೇವ ಕಟಗೆನ್ನವರ, ಬಿ.ಎಸ್. ಅಟಿಗಲ್, ಸುನೀಲ ಪಾಟೀಲ ಹಾಗೂ ವಾಹನ ಚಾಲಕ ಸಯ್ಯದ್ ಜಲಾನಿ ಈ ದಾಳಿಯ ತಂಡದಲ್ಲಿದ್ದರು.
ಮುರಗೋಡ: ಬೈಲಹೊಂಗಲ ತಾಲ್ಲೂಕಿನ ಮುರಗೋಡ ಪೊಲೀಸ್ ಠಾಣೆ ವ್ಯಾಪ್ತಿಯ ವಿವಿಧೆಡೆ ಎರಡು ಎಲೆಕ್ಟ್ರಿಕ್ ಅಂಗಡಿಗಳಲ್ಲಿ ಸಾಮಗ್ರಿಗಳನ್ನು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಈ ತಂಡದಲ್ಲಿ ಇನ್ನಿಬ್ಬರು ಕಾನೂನು ಸಂಘರ್ಷಕ್ಕೆ ಒಳಪಟ್ಟ ಬಾಲಕರನ್ನು ರಕ್ಷಣೆ ಮಾಡಲಾಗಿದೆ.
ಕೃತ್ಯದಲ್ಲಿ ಶಕಿಲ್ ಹುಸೇನ್ಸಾಬ್ ಸಯ್ಯದ್ (24) ಹಾಗೂ ಇತರರು ಇಬ್ಬರು ಇದ್ದಾರೆ. ಬಂಧಿತರಿಂದ ₹45 ಸಾವಿರ ಮೌಲ್ಯದ ವಿವಿಧ ಸಾಮಗ್ರಿಗಳು, ವಾಹನಗಳು ಸೇರಿದಂತೆ ₹3.85 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಕಾರ್ಯಾಚರಣೆಯಲ್ಲಿ ರಾಮದುರ್ಗ ಡಿಎಸ್ಪಿ ರಾಮನಗೌಡ ಹಟ್ಟಿ, ಮುರಗೋಡ ಎಸ್ಐ ಐ.ಎಂ.ಮಠಪತಿ, ಪಿಎಸ್ಐ ಎಸ್.ಎಂ. ಕಾರಜೋಳ, ಸಿಬ್ಬಂದಿಯಾದ ಸನ್ನಾಯಿಕ, ಎಸ್.ಎಂ. ಹುಂಚ, ಐ.ಎಸ್. ವಕ್ಕುಂದ, ಅಲಗರಾವುತ, ಎಂ.ಎಸ್. ಅವರಾದಿ, ಕೆ.ಆರ್. ಮುನವಳ್, ಎಂ.ಆರ್. ಗುಡಗನಟ್ಟ, ವಿ.ಡಿ. ಸಕ್ತಿ, ವಿ.ಕೆ. ಮುರಗೋಡ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.