ಬೆಳಗಾವಿ: ‘ಚಿದಾನಂದ ಅವದೂತರು ರಚಿಸಿದ 18 ಅಧ್ಯಾಯಗಳ ಕನ್ನಡದ ದೇವಿ ಪಾರಾಯಣವನ್ನು ₹ 14 ಲಕ್ಷ ವೆಚ್ಚದಲ್ಲಿ, ಗಾಯಕರಿಂದ ಹಾಡಿಸಿ ಸಿ.ಡಿ. ಮಾಡಿಸಿ (ಕನ್ನಡದಲ್ಲಿ) ಪರಿಚಯಿಸಿದ ಕೀರ್ತಿ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಸಲ್ಲುತ್ತದೆ’ ಎಂದು ಉಜ್ಜಯಿನಿ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ಲಕ್ಷ್ಮಿ ಟೆಕಡಿಯಲ್ಲಿರುವ ಹುಕ್ಕೇರಿ ಹಿರೇಮಠ ಶಾಖೆಯಲ್ಲಿ ಈಚೆಗೆ ನಡೆದ 49ನೇ ಸುವಿಚಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಗಡಿ ನಾಡು ಬೆಳಗಾವಿಯಲ್ಲಿ ಕನ್ನಡದ ಕೈಂಕರ್ಯದ ಶ್ರೀಗಳು ಸಿಕ್ಕಿದ್ದಾರೆ. ಜಿಲ್ಲೆಯಲ್ಲಿ ಸರ್ವಧರ್ಮೀಯರ ಹಿತ ಕಾಪಾಡುವ ಜೊತೆಗೆ ಸಮಾಜಮುಖಿ ಕೆಲಸವನ್ನೂ ಹುಕ್ಕೇರಿ ಹಿರೇಮಠ ಮಾಡುತ್ತಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಆರ್ಎಸ್ಎಸ್ ಪ್ರಮುಖ ಮನೋಹರ ಮಠದ, ‘ದೇಶದಲ್ಲಿ ಅಧಿಕೃತವಾಗಿ 1.30 ಲಕ್ಷ ಮಠಗಳಿವೆ. ಅವು ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸುತ್ತಿವೆ’ ಎಂದರು.
ಕಸಾಪ ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಲಾ ಮೆಟಗುಡ್ಡ, ‘ಹುಕ್ಕೇರಿ ಹಿರೇಮಠದ ಶ್ರೀಗಳು ಕನ್ನಡ ಕಾರ್ಯಕ್ಕೆ ಬೆಂಗಾವಲಾಗಿ ನಿಂತಿದ್ದಾರೆ. ಕನ್ನಡಿಗರಿಗೆ ರಾಜ್ಯೋತ್ಸವದ ಸಂದರ್ಭದಲ್ಲಿ ಹೋಳಿಗೆ ಊಟ ಬಡಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಕನ್ನಡದ ಅನೇಕ ಗ್ರಂಥಗಳನ್ನು ಹೊರ ತಂದಿದ್ದಾರೆ’ ಎಂದು ಶ್ಲಾಘಿಸಿದರು.
ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಸತ್ಯಗಿರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ವಿಜಯ ಶಾಸ್ತ್ರಿ, ಮಹಾಂತೇಶ ಶಾಸ್ತ್ರಿ, ವಿರೂಪಾಕ್ಷಯ್ಯ ನೀರಲಗಿಮಠ, ವಿದ್ವಾನ್ ಚಂದ್ರಶೇಖರ ಸ್ವಾಮೀಜಿ ಇದ್ದರು.