ತೆಲಸಂಗ (ಬೆಳಗಾವಿ ಜಿಲ್ಲೆ): ‘ಸೈನಿಕರು ಪ್ರಾಣದ ಹಂಗು ತೊರೆದು ಯುಧ್ಧಭೂಮಿಯಲ್ಲಿ ಜೀವ ತೆತ್ತು ದೇಶದ ರಕ್ಷಣೆ ಮಾಡುತ್ತಾರೆ. ಅವರ ತ್ಯಾಗಕ್ಕೆ ಮತ್ತು ಹರಿಸಿದ ರಕ್ತಕ್ಕೆ ಅರ್ಥ ಬರಬೇಕಾದರೆ ಜನರು ದೇಶಕ್ಕಾಗಿ ಬದುಕುವುದನ್ನು ಕಲಿಯಬೇಕು’ ಎಂದು ಹಿರೇಮಠದ ವೀರೇಶ್ವರ ದೇವರು ಹೇಳಿದರು.
ಗ್ರಾಮದ ಮುಖ್ಯ ಬಜಾರ್ನಲ್ಲಿ ನಿವೃತ್ತ ಸೈನಿಕರ ಸಂಘದಿಂದ ಸೋಮವಾರ ಏರ್ಪಡಿಸಿದ್ದ ಕಾರ್ಗಿಲ್ ವಿಜಯ ದಿವಸ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ನೆರೆಯ ಪಾಕಿಸ್ತಾನ ಪದೇ ಪದೇ ದೇಶದೊಳಕ್ಕೆ ನುಸಳಲು ಯತ್ನಿಸುತ್ತಲೇ ಇದೆ. ನಮ್ಮ ಸೈನಿಕರು ಅದೆಷ್ಟು ಬಾರಿ ಸೊಕ್ಕಡಗಿಸಿದರೂ ಆ ದೇಶ ಪಾಠ ಕಲಿತಿಲ್ಲ. ಭಾರತದ ಯೋಧರ ವೀರತ್ವದ ಬಗ್ಗೆ ಜಗತ್ತೇ ಶ್ಲಾಘಿಸುತ್ತಿದೆ. ಕಾರ್ಗಿಲ್ ಯುದ್ಧ ಗೆದ್ದ ಸೈನಿಕರ ಶೌರ್ಯವನ್ನು ಬಣ್ಣಿಸಲು ಪದಗಳೇ ಇಲ್ಲ. ಕಾರ್ಗಿಲ್ ಯುದ್ಧದಲ್ಲಿ ಮಡಿದ ವೀರ ಯೋಧರ ಆತ್ಮಕ್ಕೆ ಸಾಂತಿ ಸಿಗಲಿ’ ಎಂದರು.
ಗ್ರಾ.ಪಂ. ಅಧ್ಯಕ್ಷ ವಿಲಾಸ್ ಮೋರೆ, ಸಂಘದ ಅಧ್ಯಕ್ಷ ಸಾಬು ಅರಟಾಳ, ಗಂಗಪ್ಪ ಗಂಗಾಧರ, ಬಸವರಾಜ ರೊಟ್ಟಿ, ಶಿವಯೋಗಿ ಹತ್ತಿ, ಮುನ್ನಾ ಕರಜಗಿ, ಬಸವರಾಜ ಬಿಜ್ಜರಗಿ, ಮಹಾದೇವ ಸಾವಂತ, ಅನಿಲ ಚವಾಣ, ಅಪ್ಪು ಕುಮಠಳ್ಳಿ, ಹಣಮಂತ ಅವಟಿ, ಡಾ.ಬಿ.ಎಸ್. ಕಾಮನ್, ಡಾ.ಎಸ್.ಐ. ಇಂಚಗೇರಿ ಇದ್ದರು.