ಅಥಣಿ: ಯುವಕ, ಯುವತಿಯರು ದೇಶದ ರಕ್ಷಣೆಗಾಗಿ ಸೇನೆ ಸೇರಬೇಕು ಎಂದು ಮಾಜಿ ಸೈನಿಕ ನಿಂಗಪ್ಪ ದೊಡ್ಡಣ್ಣನವರ ಹೇಳಿದರು.
ವಿಮೋಚನಾ ಸಂಸ್ಥೆಯ ನಿವೇದಿತಾ ಇಂಗ್ಲಿಷ್ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
‘1999ರಲ್ಲಿ ಭಾರತ ಮತ್ತು ಪಾಕಿಸ್ತಾನ ಯೋಧರ ನಡುವೆ ನಡೆದ ಸಂಘರ್ಷದಲ್ಲಿ ಭಾರತೀಯ ಸೇನೆಯು ವಿಜಯ ಪತಾಕೆ ಹಾರಿಸಿದ ಸವಿನೆನಪಿಗೆ ಮತ್ತು ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ನಮನ ಸಲ್ಲಿಸುವ ಉದ್ದೇಶದಿಂದ ದೇಶದೆಲ್ಲೆಡೆ ಕಾರ್ಯಕ್ರಮ ನಡೆಸಲಾಗುತ್ತಿದೆ’ ಎಂದರು.
ಉತ್ತರ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷ ಅಣ್ಣಾಸಾಬ ತೆಲಸಂಗ ಮಾತನಾಡಿ, ‘ವಿಮೋಚನಾ ಸಂಸ್ಥೆ ಅಧ್ಯಕ್ಷ ಬಿ.ಎಲ್. ಪಾಟೀಲರು ವಿಮೋಚನಾ ಪುಸ್ತಕ ಪ್ರಕಾಶನದ ಮೂಲಕ ಕಾರ್ಗಿಲ್ ಯೋಧದ ಪರಿಹಾರ ನಿಧಿಗೆ ₹ 1 ಲಕ್ಷ ನೀಡಿ ದೇಶ ಸೇವೆಯ ಕೆಲಸ ಮಾಡಿದ್ದಾರೆ’ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಲೆಯ ಆಡಳಿತ ಮಂಡಳಿ ಸದಸ್ಯ ಮಂಜುನಾಥ ಪಾಟೀಲ ಮಾತನಾಡಿದರು. ಸಂಸ್ಥೆಯ ಆಡಳಿತಾಧಿಕಾರಿ ಮಹಾದೇವ ತೊಟಗಿ, ಶಿಕ್ಷಕರಾದ ಭಾರತಿ ಮೋಹಿತೆ, ಶಿವಾನಿ ಗಸ್ತಿ, ಯೋಗಿತಾ ಖೋತ, ಅಶ್ವಿನಿ ಇಚಿಡಿ, ಅನಿತಾ ಕಾಂಬಳೆ, ಭಾರತಿ ಬಿರಾದಾರ, ಪದ್ಮಾ ಪಡಸಲಗಿ, ಶೋಭಾ ಪಾಟೀಲ, ಅರ್ಜುನ ಕೋಳಿ ಇದ್ದರು.