ಬೆಳಗಾವಿ: ‘ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಿದ್ದರಾಮಯ್ಯ ಸೇರಿದಂತೆ ಯಾರು ಏನೇ ಹೇಳಿದರೂ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ. ನಮ್ಮ ಪಕ್ಷದವರು ಏನಾದರೂ ಆ ಬಗ್ಗೆ ಹೇಳಿದ್ದರೆ ಪ್ರತಿಕ್ರಿಯಿಸಬಹುದು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
‘ಏಪ್ರಿಲ್ನಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗಲಿದೆ. ಆ ವಿಷಯ ಆರ್ಎಸ್ಎಸ್ ಮೂಲದಿಂದ ನನಗೆ ತಿಳಿದುಬಂದಿದೆ’ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಇಲ್ಲಿ ಭಾನುವಾರ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಎಲ್ಲಿಂದ ಬಂದಿದ್ದಾರೆ? ಅವರೇನು ಆರ್ಎಸ್ಎಸ್ನಲ್ಲಿ ಇದ್ದವರಾ? ಅವರ ಹೇಳಿಕೆಯ ಮೂಲ ಯಾವುದು?’ ಎಂದು ಕೇಳಿದರು.
‘ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಜೊತೆ ಫೋನ್ ನಲ್ಲಿ ಸರಿಯಾಗಿ ಸಂಪರ್ಕ ಇಟ್ಟುಕೊಳ್ಳಲು ಅವರಿಗೆ ಹೇಳಬೇಕು. ಅವರ ನಾಯಕರ ಜೊತೆಯೇ ಸರಿಯಾಗಿ ಸಂಪರ್ಕ ಇಟ್ಟುಕೊಳ್ಳದವರ ಜೊತೆ ಆರ್ಎಸ್ಎಸ್ ನವರು ಮಾತನಾಡುತ್ತಾರೆಯೇ’ ಎಂದು ಪ್ರಶ್ನಿಸಿದರು.
ಅಸಮಾಧಾನವಿದೆ, ಇಲ್ಲಿ ಪ್ರಸ್ತಾಪಿಸುವುದಿಲ್ಲ: ಅರವಿಂದ ಬೆಲ್ಲದ ಬೆಳಗಾವಿ: ಸಚಿವ ಸಂಪುಟದಲ್ಲಿ ಸ್ಥಾನ ಸಿಗದ ಶಾಸಕರಲ್ಲಿ ಅಸಮಾಧಾನ ಇರುವುದು ಸಹಜ. ಆದರೆ, ಆ ಕುರಿತು ಪ್ರಸ್ತಾಪಿಸಲು ಇದು ಸ್ಥಳವಲ್ಲ. ದೆಹಲಿಗೆ ಹೋಗಿ ವರಿಷ್ಠರೊಂದಿಗೆ ಚರ್ಚಿಸುತ್ತೇವೆ ಎಂದು ಶಾಸಕ ಅರವಿಂದ ಬೆಲ್ಲದ ಪ್ರತಿಕ್ರಿಯಿಸಿದರು.
ಜನಸೇವಕ ಸಮಾವೇಶ ಸಮಾರೋಪದಲ್ಲಿ ಕೇಂದ್ರ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರು ಪಾಲ್ಗೊಳ್ಳಲು ಬಂದಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.
ಅಸಮಾಧಾನ ಇರುವುದನ್ನು ನಾವು ಭೇಟಿಯಾದಾಗ ಚರ್ಚಿಸುತ್ತೇವೆ. ಪ್ರಸ್ತಾಪಿಸಲು ಇದು ಸ್ಥಳವಲ್ಲ ಎಂದರು.
ಬಸನಗೌಡ ಪಾಟೀಲ ಯತ್ನಾಳ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದರು.