ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಪೇಗೌಡ ಪ್ರತಿಮೆಗೆ ಕಿತ್ತೂರು ಮಣ್ಣು: ಇದೇ 11ರಂದು ಪ್ರತಿಮೆ ಅನಾವರಣ

Last Updated 5 ನವೆಂಬರ್ 2022, 7:51 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು: ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣಗೊಳ್ಳುತ್ತಿದ್ದು, ಅದಕ್ಕೆ ಪೂರಕವಾಗಿ ಕ್ರಾಂತಿಯ ನೆಲ ಕಿತ್ತೂರು ಕೋಟೆ ಆವರಣದಿಂದ ಮಣ್ಣು ಸಂಗ್ರಹ ಮಾಡಿ ಶುಕ್ರವಾರ ಬೆಂಗಳೂರಿಗೆ ಕಳುಹಿಸಲಾಯಿತು.

ಗೃಹ ಸಚಿವ ಆರಗ ಜ್ಞಾನೇಂದ್ರ, ಕಂದಾಯ ಸಚಿವ ಆರ್. ಅಶೋಕ, ಯುವಜನ ಹಾಗೂ ಕ್ರೀಡಾ ಸಚಿವ ನಾರಾಯಣ ಗೌಡ, ಉನ್ನತ ಶಿಕ್ಷಣ, ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಚಿವ ಡಾ.ಅಶ್ವಥ್‌ ನಾರಾಯಣ ಅವರು ಪವಿತ್ರ ಮೃತಿಕೆಯನ್ನು ಸಂಗ್ರಹಿಸಿದರು.

ಬೆಂಗಳೂರಿನಲ್ಲಿ ನಿರ್ಮಿಸಿರುವ 108 ಅಡಿ ಎತ್ತರದ ಕೆಂಪೇಗೌಡರ ಕಂಚಿನ ಭವ್ಯ ಪ್ರತಿಮೆ ನವೆಂಬರ್ 11ರಂದು ಅನಾವರಣಗೊಳಿಸಲಿದೆ. ಅದರ ಉಳಿದ ಕೆಲಸದಲ್ಲಿ ಬೆರೆಸಲು ಇಲ್ಲಿಂದ ಮಣ್ಣು ಸಂಗ್ರಹಿಸಲಾಯಿತು.

ಕೆಂಪೇಗೌಡ ಪಾರಂಪರಿಕ ತಾಣಗಳ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷ ಅಶ್ವಥ್‌ ನಾರಾಯಣ ಮಾತನಾಡಿ, ‘ಹಂಪಿ, ಕೂಡಲಸಂಗಮದ ಪವಿತ್ರ ಮಣ್ಣನ್ನು ಸಂಗ್ರಹಿಸಲಾಗಿದೆ. ಕಿತ್ತೂರು ರಾಣಿ ಚನ್ನಮ್ಮ ಅವರ ಕೊಡುಗೆ ಇಡೀ ದೇಶಕ್ಕೆ ಸ್ಫೂರ್ತಿಯಾಗಿದೆ. ಚನ್ನಮ್ಮ ನೆಲೆಸಿದ ಸ್ಥಳದಿಂದ ಮೃತಿಕೆಯನ್ನು ಸಂಗ್ರಹಣೆ ಮಾಡುವುದರ ಮೂಲಕ ಐತಿಹಾಸಿಕ ಸ್ಥಳಗಳ ಕುರಿತು ಇಡೀ ವಿಶ್ವಕ್ಕೆ ಸಂದೇಶ ಕೊಡುವ ಕಾರ್ಯವಾಗಿದೆ’ ಎಂದು ಮಾಹಿತಿ ನೀಡಿದರು.

‘500 ವರ್ಷಗಳ ಹಿಂದೆ ಕೆಂಪೇಗೌಡರು ಮಾಡಿದ ಕೆಲಸ ಇಂದಿಗೂ ಮಾದರಿಯಾಗಿದೆ. ಕೆಂಪೇಗೌಡರ ಸ್ಥಳವು ಶಕ್ತಿಕೇಂದ್ರವಾಗಿ ಬೆಳೆಯಬೇಕು. ಅದರಿಂದ ಇಲ್ಲಿನ ನೆಲದ ಪವಿತ್ರ ಮಣ್ಣನ್ನು ಸಾಂಕೇತಿಕವಾಗಿ ತೆಗೆದುಕೊಂಡು ಹೋಗಲಾಗುತ್ತಿದೆ’ ಎಂದರು.

ಕಿತ್ತೂರು ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ನಿಚ್ಚಣಕಿ ಪಂಚಾಕ್ಷರಿ ಸ್ವಾಮೀಜಿ, ಶಾಸಕರಾದ ಮಹಾಂತೇಶ ದೊಡ್ಡಗೌಡರ, ಅಭಯ ಪಾಟೀಲ, ಕಾಡಾ ಅಧ್ಯಕ್ಷ ವಿಶ್ವನಾಥ ಪಾಟೀಲ, ಬೆಳಗಾವಿ ಗ್ರಾಮೀಣ ಘಟಕದ ಜಿಲ್ಲಾ ಅಧ್ಯಕ್ಷ ಸಂಜಯ ಪಾಟೀಲ, ಕಿತ್ತೂರುಅಭಿವೃದ್ಧಿ ಪ್ರಾಧಿಕಾರ ಸದಸ್ಯ ಉಳವಪ್ಪ ಉಳ್ಳಾಗಡ್ಡಿ ಇದ್ದರು.

*

ಎಲ್ಲ ಆಯಾಮಗಳಲ್ಲಿ ತನಿಖೆ: ಗೃಹ ಸಚಿವ ಆರಗ
‘ಶಾಸಕ ರೇಣುಕಾಚಾರ್ಯ ಅವರ ಸಹೋದರನ ಪುತ್ರ ಚಂದ್ರಶೇಖರ ಸಾವನ್ನು ‘ಅಸಹಜ ಸಾವು’ ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತಿಳಿಸಿದರು.

ಶುಕ್ರವಾರ ಕಿತ್ತೂರಿಗೆ ಆಗಮಿಸಿದ್ದ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ‘ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಎಲ್ಲ ಆಯಾಮಗಳಲ್ಲಿ ಹಾಗೂ ಗಂಭೀರವಾಗಿ ತನಿಖೆ ನಡೆಸಲಾಗುತ್ತಿದೆ. ವಿಶೇಷ ತಂಡ ರಚನೆ ಮಾಡಲಾಗಿದೆ. ಸ್ಥಳಕ್ಕೆ ವಿಧಿವಿಜ್ಞಾನ ತಂಡ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದೆ’ ಎಂದು ಹೇಳಿದರು.

‘ಕಳೆದ 31ರಂದು ಹೊನ್ನಾಳಿಯಿಂದ ಹೋದವರು ನಾಪತ್ತೆಯಾಗಿದ್ದರು. ಕಾಲುವೆಯಲ್ಲಿ ಕಾರಿನಲ್ಲಿ ಶವ ಪತ್ತೆಯಾಗಿತ್ತು. ಅದು ಕೊಲೆಯೋ ಅಥವಾ ಅಸಹಜ ಸಾವೋ ಎಂಬ ನಿಟ್ಟಿನಲ್ಲಿ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT