ಬೈಲಹೊಂಗಲ (ಬೆಳಗಾವಿ ಜಿಲ್ಲೆ) : ಪಟ್ಟಣದ ಕೇಂದ್ರ ಬಸ್ ನಿಲ್ದಾಣದಿಂದ ಉಳವಿಗೆ ತೆರಳುತ್ತಿದ್ದ ಬಸ್ಸಿನಲ್ಲಿ, ಶನಿವಾರ ಸೀಟಿಗಾಗಿ ಮಹಿಳಾ ಪ್ರಯಾಣಿಕರು ಜಗಳಾಡಿಕೊಂಡಿದ್ದಾರೆ.
ಚಾಲಕ ಪ್ಲಾಟ್ ಫಾರ್ಮ್ ನಲ್ಲಿ ಬಸ್ ನಿಲ್ಲಿಸುತ್ತಿದ್ದಂತೆ ಸೀಟ್ ಹಿಡಿಯಲು ತಾ ಮುಂದು, ನಾ ಮುಂದು ಎನ್ನುತ್ತ ದೌಡಾಯಿಸಿದರು. ತಮ್ಮ ಸಾಮಾನುಗಳು ಕಿಟಕಿಯಲ್ಲಿ ಎಸೆದು ಸೀಟ್ ಬುಕ್ ಮಾಡಿದರು. ಕೆಲವರಂತೂ ಚಿಕ್ಕ ಮಕ್ಕಳನ್ನೂ ಕಿಡಿಕಿಯಿಂದ ಗಾಡಿಯೊಳಗೆ ತೂರಿದರು. ಇನ್ನು ಕೆಲವರು ಚಾಲಕರ ಹತ್ತಲು ಇರುವ ಬಾಗಿಲನ್ನೂ ತೆಗೆದು ಬಸ್ಸಿನೊಳಗೆ ನುಗ್ಗಿದರು. ಇಷ್ಟಾದ ಮೇಲೂ ಸೀಟ್ ಸಿಗದ ನಾಲ್ವರು ಮಹಿಳೆಯರ ಮಧ್ಯೆ ಪರಸ್ಪರ ವಾಗ್ವಾದ, ತಂಟೆ ಶುರುವಾಯಿತು.
ಅಧಿಕ ಮಾಸದ ಅಂಗವಾಗಿ ಉಳವಿ ಕ್ಷೇತ್ರ, ಧರ್ಮಸ್ಥಳ ಕ್ಷೇತ್ರಕ್ಕೆ ತೆರಳಿದ ಬಸ್ಸುಗಳಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. ಶನಿವಾರ ಕೂಡ ಇದೇ ಪರಿಸ್ಥಿತಿ ಕಂಡುಬಂತು. ಬಸ್ ಹತ್ತುವುದಕ್ಕಿಂತ ಮೊದಲೇ ಕೈಯಲ್ಲಿ ಆಧಾರ ಕಾರ್ಡ್ ಹಿಡಿದು ಬರುತ್ತಿದ್ದಾರೆ. ನೂಕಾಟ– ತಳ್ಳಾಟ ದಿನವೂ ನಡೆದಿದೆ.
ಇದರ ಮಧ್ಯೆಯೇ ಅಜ್ಜಿ– ಅಜ್ಜಿ ಕೂಡ ಚಾಲಕರ ಕಡೆಯ ಬಾಗಿಲಿನಿಂದಲೇ ಬಸ್ಸಿನೊಳಗೆ ನುಗ್ಗಿದ್ದನ್ನು ಕಂಡು ಜನ ಬೆರಗಾದರು.
ಇನ್ನೂ ಒಂದು ತಿಂಗಳು ಶ್ರಾವಣ ಮಾಸವಿದ್ದು, ತೀರ್ಥಕ್ಷೇತ್ರಗಳಿಗೆ ಹೋಗುವ ಜನ ಪರದಾಡುವಂತಾಗಿದೆ. ಹೆಚ್ಚಿನ ಬಸ್ ಬಿಡದ ಕಾರಣ ಈ ಸ್ಥಿತಿ ಬಂದಿದೆ ಎಂದು ಮಹಿಳೆಯರು ದೂರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.