ಐಗಳಿ: ‘ತಂದೆ–ತಾಯಿ ಸೇವೆ ಮಾಡಿದರೆ, ಗುರು ಹಾಗೂ ಕಲಿಸಿದ ಶಾಲೆಯ ಋಣದ ಭಾರ ಕಡಿಮೆ ಮಾಡಿಕೊಳ್ಳುವ ಮನೋಭಾವ ಬೆಳೆಸಿಕೊಂಡರೆ ದೇವರು ಮೆಚ್ಚುತ್ತಾನೆ’ ಎಂದು ವಿಜಯಪುರದ ದ್ರೋಣಾಸ್ ಸೈನಿಕ ತರಬೇತಿ ಅಕಾಡೆಮಿ ಮುಖ್ಯಸ್ಥ ಕಲ್ಮೇಶ ಆಸಂಗಿ ಹೇಳಿದರು.
ಇಲ್ಲಿ ತಾವು ಓದಿದ ಐಗಳಿ ತೋಟದ ಸರ್ಕಾರಿ ಪ್ರಾಥಮಿಕ ಶಾಲೆಗೆ ಧ್ವನಿವರ್ಧಕ, ಬಿಳಿಯ ಬೋರ್ಡ್, ಮಕ್ಕಳಿಗೆ ಆಟಿಕೆ, ಪುಸ್ತಕ, ಬ್ಯಾಂಡ್ ವಿತರಿಸಿ ಅವರು ಮಾತನಾಡಿದರು.
‘ಶಿಕ್ಷಕರು ಮತ್ತು ಪೋಷಕರು ಮಕ್ಕಳಿಗೆ ಒಳ್ಳೆಯ ವಿಚಾರಗಳನ್ನು ಹೇಳಬೇಕು. ಪ್ರೇರಣೆ ಕೊಡಬೇಕು. ಪ್ರತಿ ಕುಟುಂಬದಲ್ಲಿ ಒಬ್ಬರಾದರೂ ಸರ್ಕಾರಿ ನೌಕರರಿಗೆ ಸೇರಬೇಕು. ಆಗ ಆರ್ಥಿಕ ಸಬಲೀಕರಣ ಸಾಧ್ಯವಾಗುತ್ತದೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಬ್ಯಾಂಕ್ನ ನಿವೃತ್ತ ಅಧಿಕಾರಿ ಎಂ.ಎಸ್. ಹಾಲಳ್ಳಿ, ಹಳೆಯ ವಿದ್ಯಾರ್ಥಿ ಕೇದಾರಿ ಬಿರಾದಾರ, ಆರ್.ಎಂ. ಹಾಲಳ್ಳಿ, ಸಿಆರ್ಪಿ ಮಹಾಂತೇಶ ಗುಡದಿನ್ನಿ ಮಾತನಾಡಿದರು.