ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಬಿಜೆಪಿ ತನ್ನ ನಿಲುವು ಸ್ಪಷ್ಟಪಡಿಸಲಿ: ಹೆಬ್ಬಾಳಕರ

Published 29 ಏಪ್ರಿಲ್ 2024, 7:03 IST
Last Updated 29 ಏಪ್ರಿಲ್ 2024, 7:03 IST
ಅಕ್ಷರ ಗಾತ್ರ

ಬೆಳಗಾವಿ: ‘ಬಿಜೆಪಿ ಮೈತ್ರಿಕೂಟದ ಪಾಲುದಾರ, ಜೆಡಿಎಸ್‌ ಸಂಸದ ಪ್ರಜ್ವಲ್ ರೇವಣ್ಣ ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದ ವಿಚಾರವಾಗಿ, ಬಿಜೆಪಿಯವರು ತಮ್ಮ ನಿಲುವು ಸ್ಪಷ್ಟಪಡಿಸಬೇಕು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಆಗ್ರಹಿಸಿದರು.

ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಹಿಳೆಯರಿಗೆ ಅನ್ಯಾಯವಾದಾಗ, ಬಿಜೆಪಿ ನೈತಿಕ ಬಲ ತುಂಬುತ್ತದೆ. ನ್ಯಾಯ ಕೋರಿ ಹೋರಾಟಕ್ಕೆ ಇಳಿಯುತ್ತದೆ. ಆದರೆ, ನೂರಾರು ಮಹಿಳೆಯರಿಗೆ ಅನ್ಯಾಯವಾಗಿರುವ ಈ ಪ್ರಕರಣದ ಕುರಿತಾಗಿ ಆ ಪಕ್ಷದ ಯಾವ ನಾಯಕರೂ ಮಾತನಾಡುತ್ತಿಲ್ಲ’ ಎಂದು ಆರೋಪಿಸಿದರು.

‘ಇದು ಇಡೀ ಸಮಾಜವೇ ತಲೆ ತಗ್ಗಿಸುವಂಥ ಘಟನೆ‌. ಬಿಜೆಪಿ ಮುಖಂಡ ದೇವರಾಜಗೌಡ ಮತ್ತು ಮಾಜಿ ಶಾಸಕ ಪ್ರೀತಮ್‌ ಗೌಡ ಅವರು, ಪ್ರಜ್ವಲ್‌ ಲೈಂಗಿಕ ದೌರ್ಜನ್ಯದ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ತಿಳಿಸಿದ್ದರು. ಆದರೆ, ಬಿಜೆಪಿಯವರು ರಾಜಕೀಯ ಲಾಭಕ್ಕಾಗಿ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ’ ಎಂದು ಆಪಾದಿಸಿದರು.

‘ಪ್ರಜ್ವಲ್‌ ಅವರಿಂದ ಎಷ್ಟು ಮಹಿಳೆಯರು ಅನ್ಯಾಯಕ್ಕೆ ಒಳಗಾಗಿದ್ದಾರೆ ಎಂಬುದು ತನಿಖೆ ನಂತರವೇ ತಿಳಿಯಲಿದೆ. ಅವರು ಸಂಸದರಾಗಿ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆಯೇ ಅಥವಾ ಬೇರೆ ಆಮಿಷವೊಡ್ಡಿ ಮೋಸ ಮಾಡಿದ್ದಾರೆಯೇ ಎಂಬುದನ್ನು ನೋಡಬೇಕಿದೆ. ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆಯಾದಾಗ, ಬಿಜೆಪಿ ನಾಯಕರು ರಾಜ್ಯದಾದ್ಯಂತ ಪ್ರತಿಭಟಿಸಿದ್ದರು. ಆದರೆ, ಪ್ರಜ್ವಲ್ ಕರ್ಮಕಾಂಡದ ವಿಷಯ ಬಂದಾಗ ಅದೇ ನಾಯಕರು ಕುರುಡರು ಮತ್ತು ಕಿವುಡರಂತೆ ವರ್ತಿಸುತ್ತಿದ್ದಾರೆ’ ಎಂದು ಜರಿದರು.

‘ನೇಹಾ ಕೊಲೆ ವಿರೋಧಿಸಿ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಪ್ರತಿಭಟನೆ ನಡೆಸಿದ್ದರು. ಆದರೆ, ಬಿಜೆಪಿ ಮೈತ್ರಿಕೂಟದ ವಿಕೃತ ಮನಸ್ಸಿನ ನಾಯಕನ ಕೃತ್ಯದ ವಿಚಾರವಾಗಿ ಮೌನ ವಹಿಸಿದ್ದಾರೆ. ಮಾಜಿ ಶಾಸಕ ಸಂಜಯ ಪಾಟೀಲ ನನ್ನನ್ನು ನಿಂದಿಸಿದಾಗ ಶೆಟ್ಟರ್ ಮತ್ತು ಸಂಸದೆ ಮಂಗಲಾ ಅಂಗಡಿ ನಕ್ಕಿದ್ದರು. ಈಗ ಪ್ರಜ್ವಲ್ ಕೃತ್ಯದ ವಿರುದ್ಧವೂ ಅವರೆಲ್ಲರೂ ಪ್ರತಿಭಟನೆ ನಡೆಸಬೇಕು’ ಎಂದು ಆಗ್ರಹಿಸಿದರು.

‘ಪ್ರಜ್ವಲ್ ಕೃತ್ಯಕ್ಕೆ ನೂರಾರು ಮಹಿಳೆಯರು ಬಲಿಯಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಲು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ನಿರಾಕರಿಸಿದ್ದು, ಜೆಡಿಎಸ್‌ನವರೇ ಇದಕ್ಕೆ ಉತ್ತರಿಸುತ್ತಾರೆ ಎಂದಿದ್ದಾರೆ. ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ ಮತ್ತು ಸ್ಮೃತಿ ಇರಾನಿ ಸಹ ಮೌನವಾಗಿದ್ದಾರೆ. ಬೆಳಗಾವಿಗೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ನೇಹಾ ಹತ್ಯೆ ವಿಚಾರ ಪ್ರಸ್ತಾಪಿಸಿದರು. ಆದರೆ, ಪ್ರಜ್ವಲ್ ಅವರ ವೀಡಿಯೊಗಳ ಬಗ್ಗೆ ಒಂದು ಮಾತು ಆಡಿಲ್ಲ’ ಎಂದು ಆರೋಪಿಸಿದರು.

‘ಉಡುಪಿಯ ಕಾಲೇಜೊಂದರ ಬಾತ್‌ರೂಮ್‌ನಲ್ಲಿ ಬಾಲಕಿಯರನ್ನು ಚಿತ್ರೀಕರಿಸಿದ ಘಟನೆ ಬೆಳಕಿಗೆ ಬಂದಾಗ, ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರು ಅಲ್ಲಿಗೆ ಭೇಟಿ ನೀಡಿದ್ದರು. ಆದರೆ, ಅವರ್‍ಯಾರೂ ಹಾಸನಕ್ಕೆ ಬಂದಿಲ್ಲ’ ಎಂದು ದೂರಿದರು.

‘16ರಿಂದ 60 ವರ್ಷ ವಯಸ್ಸಿನವರು ಪ್ರಜ್ವಲ್‌ ಅವರಿಂದ ಅನ್ಯಾಯಕ್ಕೆ ಒಳಗಾಗಿದ್ದಾರೆ. ಅವರಲ್ಲಿ ಕೆಲವರು ಪೊಲೀಸ್ ಅಧಿಕಾರಿಗಳು, ಮಹಿಳಾ ಅಧಿಕಾರಿಗಳು, ಪರಿಶಿಷ್ಟ ಜಾತಿ ಮತ್ತು ಪಂಗಡದವರು, ಭವಾನಿ ರೇವಣ್ಣ ಅವರ ಸಂಬಂಧಿಕರೂ ಇದ್ದಾರೆ. ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡ ರಚಿಸಲಾಗಿದೆ. ಆದರೆ, ಪ್ರಜ್ವಲ್ ವಿದೇಶಕ್ಕೆ ಹೋಗಿರುವುದರಿಂದ ಸರ್ಕಾರ ಇಂಟರ್‌ಪೋಲ್‌ಗಳ ಸಹಾಯ ಪಡೆಯಬೇಕೆಂದು ಬಯಸುತ್ತೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT