ಬೆಳಗಾವಿ: 'ಎಲ್ಲೆಡೆ ನಮ್ಮ ಪಕ್ಷದ ಪರ ವಾತಾವರಣವಿದ್ದು, ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಮೊದಲ ಸುತ್ತಿನಲ್ಲೇ ಜಯ ಗಳಿಸಲಿದ್ದಾರೆ ಎಂದು ಶಾಸಕ ಅಭಯ ಪಾಟೀಲ ಹೇಳಿದರು.
ಇಲ್ಲಿನ ಮಹಾನಗರ ಪಾಲಿಕೆ ಕಚೇರಿಯಲ್ಲಿ ಶುಕ್ರವಾರ ಮತದಾನ ಮಾಡಿದ ಬಳಿಕ ಅವರು ಮಾತನಾಡಿದರು.
ಬೆಳಗಾವಿ ಪರಿಷತ್ ಚುನಾವಣೆ ಇಡೀ ರಾಜ್ಯದ ಗಮನ ಸೆಳೆದಿದೆ. ಇಂದಿನ ವಾತಾವರಣ ನೋಡಿದರೆ ಮೂರನೇ ಬಾರಿ ಮಹಾಂತೇಶ ಕವಟಗಿಮಠ ಗೆಲ್ಲುವುದು ನಿಶ್ಚಿತ. ಕವಟಗಿಮಠ ಹ್ಯಾಟ್ರಿಕ್ ಹಿರೋ ಆಗುವುದರಲ್ಲಿ ಸಂಶಯವೇ ಇಲ್ಲ ಎಂದರು.
ಬೆಳಗಾವಿ, ಖಾನಾಪುರ ಕ್ಷೇತ್ರದಲ್ಲಿ ವಾತಾವರಣ ಬದಲಾಗಿದೆ. ಪಾಲಿಕೆಯ 35 ಬಿಜೆಪಿ ಸದಸ್ಯರ ಜೊತೆಗೆ ಐವರು ಪಕ್ಷೇತರ ಸದಸ್ಯರೂ ನಮ್ಮ ಪರವಾಗಿದ್ದಾರೆ. ಒಟ್ಟು 40 ಮತದಾರರು ನಮ್ಮ ಪರವಾಗಿ ಮತ ಚಲಾಯಿಸಲಿದ್ದಾರೆ. ಎರಡನೇ ಪ್ರಾಶಸ್ತ್ಯದ ಮತ ನೀಡುವ ವಿಚಾರವಾಗಿಯೂನಮ್ಮ ಪಕ್ಷದ ಆದೇಶ ಪಾಲನೆ ಮಾಡಲಿದ್ದಾರೆ ಎಂದರು.