ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭಾ ಚುನಾವಣೆ | ಬೆಳಗಾವಿ: ಜಗದೀಶ ಶೆಟ್ಟರ್‌ಗೆ ಟಿಕೆಟ್; ಅತೃಪ್ತರ ಸಭೆ

Published 15 ಮಾರ್ಚ್ 2024, 23:44 IST
Last Updated 15 ಮಾರ್ಚ್ 2024, 23:44 IST
ಅಕ್ಷರ ಗಾತ್ರ

ಬೆಳಗಾವಿ: ಬೆಳಗಾವಿ ಲೋಕಸಭೆ ಕ್ಷೇತ್ರದಿಂದ ಜಗದೀಶ ಶೆಟ್ಟರ್‌ ಅವರಿಗೆ ಬಿಜೆಪಿ ಟಿಕೆಟ್‌ ಖಾತ್ರಿಯಾದ ಕಾರಣ ಟಿಕೆಟ್‌ ವಂಚಿತ ಮುಖಂಡರು ರಾಜ್ಯಸಭೆ ಮಾಜಿ ಸದಸ್ಯ, ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರ ಮನೆಯಲ್ಲಿ ಶುಕ್ರವಾರ ಗೋಪ್ಯ ಸಭೆ ನಡೆಸಿದರು.

ಟಿಕೆಟ್‌ ಆಕಾಂಕ್ಷಿಗಳಾದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಅನಿಲ ಬೆನಕೆ, ವಿಧಾನ ಪರಿಷತ್‌ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಬೈಲಹೊಂಗಲದ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಮತ್ತು ಅವರ ಬೆಂಬಲಿಗರು ತುರ್ತು ಸಭೆಯಲ್ಲಿ ಪಾಲ್ಗೊಂಡರು.

‘ಟಿಕೆಟ್ ಹಂಚಿಕೆಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಬೇಕು. ಜಗದೀಶ ಶೆಟ್ಟರ್‌ಗೆ ಅವಕಾಶ ಕೊಡಬಾರದು.
ಈ ಬಗ್ಗೆ ಪಕ್ಷದ ಹೈಕಮಾಂಡ್‌ ಮೇಲೆ ಒತ್ತಡ ತರಬೇಕು ಎಂದು ಆಕಾಂಕ್ಷಿಗಳು ಸಭೆಯಲ್ಲಿ ಆಗ್ರಹಿಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ. ಆದರೆ, ಇದನ್ನು ಯಾರೂ ಬಹಿರಂಗವಾಗಿ ಹೇಳಲಿಲ್ಲ.

ಸಭೆ ಬಳಿಕ ಸುದ್ದಿಗಾರರ ಜೊತೆ ಪ್ರಭಾಕರ ಕೋರೆ ಮಾತನಾಡಿ, ‘ನಾನು ಪಕ್ಷದ ಕೋರ್‌ ಕಮಿಟಿ ಸಭೆಗೆ ಹಾಜರು ಆಗಿರಲಿಲ್ಲ. ಪಕ್ಷ ಸಂಘಟನೆ ಕುರಿತಾಗಿ ಚರ್ಚಿಸಲು ಇಲ್ಲಿ ಸೇರಿದ್ದೇವಷ್ಟೇ. ಹೈಕಮಾಂಡ್‌ ಏನು ತೀರ್ಮಾನ ಕೈಗೊಳ್ಳುವುದೋ ನೋಡೋಣ. ಶೆಟ್ಟರ್‌ಗೆ ಟಿಕೆಟ್‌ ನೀಡುವುದಕ್ಕೂ, ನಾವು ಸೇರಿದ್ದಕ್ಕೂ ಸಂಬಂಧವಿಲ್ಲ’ ಎಂದರು.

‘ನಾವು ಯಾರನ್ನೂ ವಿರೋಧಿಸಲು ಸಭೆ ನಡೆಸಿಲ್ಲ’ ಎಂದು ಈರಣ್ಣ‌ ಕಡಾಡಿ ತಿಳಿಸಿದರು. ಶಾಸಕ ಅಭಯ ಪಾಟೀಲ, ‘ಸ್ಥಳೀಯವಾಗಿ ಅನೇಕರು ಸಮರ್ಥರಿದ್ದಾರೆ. ಸ್ಥಳೀಯರಿಗೆ ಕೊಡಬೇಕೆಂದು ಕಾರ್ಯಕರ್ತರ ಅಪೇಕ್ಷೆ. ರಾಷ್ಟ್ರೀಯ ನಾಯಕರು ಯಾರಿಗೆ ಟಿಕೆಟ್‌ ನೀಡುತ್ತಾರೆ ಎಂದು ಹೇಳುವವರೆಗೆ ಪ್ರತಿಕ್ರಿಯಿಸುವುದಿಲ್ಲ’ ಎಂದರು.

ಪಕ್ಷದ ರಾಜ್ಯ ವಕ್ತಾರ ಎಂ.ಬಿ.ಝಿರಲಿ, ವಿರೂಪಾಕ್ಷ ‌ಮಾಮನಿ, ರಾಜೇಂದ್ರ ಹರಕುಣಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT