ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: 26ರಿಂದ ಸಿರಿಧಾನ್ಯ ಮೇಳ

Last Updated 23 ಜನವರಿ 2023, 14:27 IST
ಅಕ್ಷರ ಗಾತ್ರ

ಬೆಳಗಾವಿ: ಸಿರಿಧಾನ್ಯಗಳ ಬಗ್ಗೆ ಅರಿವು ಮೂಡಿಸುವುದು ಹಾಗೂ ಸಿರಿಧಾನ್ಯ ಬೆಳೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಜ. 26 ಹಾಗೂ 27ರಂದು ನಗರದಲ್ಲಿ ‘ಸಿರಿಧಾನ್ಯ ಮೇಳ’ ಆಯೋಜಿಸಲಾಗಿದೆ. ಇದರ ಅಂಗವಾಗಿ ಎರಡು ದಿನ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ ಎಂದು ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆ ಹಾಗೂ ಕೃಷಿಕ ಸಮಾಜದ ಆಶ್ರಯದಲ್ಲಿ ಈ ಮೇಳ ನಡೆಯಲಿದೆ. 2023ನೇ ವರ್ಷವನ್ನು ‘ಅಂತರಾಷ್ಟ್ರೀಯ ಸಿರಿಧಾನ್ಯ ವರ್ಷ’ ಎಂದು ಘೋಷಿಸಲಾಗಿದೆ. ಇದರ ಅಂಗವಾಗಿ ನಗರದ ಸರದಾರ ಮೈದಾನದಲ್ಲಿ ಮೇಳಕ್ಕಾಗಿ ಸಿದ್ಧತೆ ಮಾಡಲಾಗಿದೆ. 26ರಂದು ಬೆಳಿಗ್ಗೆ 11ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಉದ್ಘಾಟಿಸುವರು ಎಂದು ಅವರು ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮೇಳದಲ್ಲಿ 80 ವಸ್ತುಪ್ರದರ್ಶನ ಮಳಿಗೆ ಹಾಕಲಾಗುವುದು. ಸಿರಿಧಾನ್ಯ ಮತ್ತು ಸಾವಯವ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಸಿರಿಧಾನ್ಯಗಳಿಂದ ತಯಾರಿಸಿದ ಆಹಾರ ಪ್ರದರ್ಶನ, ಸ್ಪರ್ಧೆ ನಡೆಯಲಿದೆ. ಪ್ರಧಾನ ಮಂತ್ರಿ ಕಿರು ಆಹಾರ ಸಂರಕ್ಷಣೆ ಉದ್ದಿಮೆ ಯೋಜನೆ (ಪಿ.ಎಂ.ಎಫ್‌.ಎಂ.ಇ) ಫಲಾನುಭವಿಗಳ ಯಶೋಗಾಥೆ ತಿಳಿಸಲು ಅವರು ತಯಾರಿಸಿದ ಉತ್ಪನ್ನಗಳ ಮಾರಾಟ ಮಳಿಗೆಗಳು ಇರಲಿವೆ ಎಂದರು.

ಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ ‘ಕೃಷಿ ಜ್ಞಾನ ಭಂಡಾರ’ ಎಂಬ ವಿಶೇಷ ಮಳಿಗೆ ಹಾಕಿ ಅದರಲ್ಲಿ ಕೃಷಿ ಮತ್ತು ಕೃಷಿ ಸಂಬಂಧಿಸಿದ ಮಾದರಿಗಳನ್ನು ಬಿತ್ತರಿಸಲಾಗುವುದು. ಕೃಷಿಯಲ್ಲಿ ಡ್ರೋಣ್‌ ಬಳಕೆಯ ಪ್ರಾತ್ಯಕ್ಷಿಕೆ ಕೂಡ ನೀಡಲಾಗುವುದು. ರೈತರಿಗೆ ಸಿರಿಧಾನ್ಯ, ಸಾವಯವ, ಆಹಾರದಲ್ಲಿ ಆರೋಗ್ಯ ಮತ್ತು ಮಣ್ಣಿನ ಆರೋಗ್ಯ ಹಾಗೂ ಇನ್ನಿತರ ವಿಷಯಗಖ ಕುರಿತು ಧಾರವಾಡದ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಹಾಗೂ ಪ್ರಗತಿಪರ ರೈತರಿಂದ ವಿಷಯ ಮಂಡನೆ ಮತ್ತು ಚರ್ಚಾಗೋಷ್ಠಿ ನಡೆಸಲಾಗುವುದು. ಜ.26 ರಂದು ಸಂಜೆ ಸಾಂಸ್ಕೃತಿಕ ಮೇಳ ಕೂಡ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಉದ್ದೇಶವೇನು?:
ಇತ್ತೀಚಿನ ದಿನಗಳಲ್ಲಿ ‘ಜಂಕ್‌ಫುಡ್’ ಸೇವನೆಯಿಂದಾಗಿ ಜನರು ಅನೇಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಸಿರಿಧಾನ್ಯಗಳಾದ ನವಣೆ, ಕೊರಲೆ, ಊದಲು, ಹಾರಕ, ಬರಗು, ರಾಗಿ, ಸಜ್ಜೆ ಮತ್ತು ಜೋಳದಿಂದ ತಯಾರಿಸಿದ ಆಹಾರಗಳನ್ನು ಸೇವಿಸಿದಾಗ ಸದೃಢವಾಗಿ, ಸಶಕ್ತವಾಗಿ ಮತ್ತು ಆರೋಗ್ಯದಿಂದ ಇರಲು ಸಾಧ್ಯ. ಆದ್ದರಿಂದ ಸಿರಿಧಾನ್ಯ ಮತ್ತು ಸಾವಯವ ಆಹಾರ ಧಾನ್ಯಗಳ ಬಗ್ಗೆ ಜನರಿಗೆ ಮಾಹಿತಿ ನೀಡಿ, ಜಾಗೃತಿ ಮೂಡಿಸುವ ಉದ್ದೇಶದಿಂದ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಅವರು ಪ್ರಚಾರ ಸಾಮಗ್ರಿಗಳನ್ನು ಬಿಡುಗಡೆಗೊಳಿಸಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್.ವಿ.ದರ್ಶನ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ಉಪ ಕೃಷಿ ನಿರ್ದೇಶಕರಾದ ಎಸ್.ಬಿ.ಕೊಂಗವಾಡ, ಶ್ರೀಮತಿ ಹೂಗಾರ್, ಚಿಕ್ಕೋಡಿಯ ಕೃಷಿ ಉಪ ನಿರ್ದೇಶಕ ಎಲ್.ಐ.ರೂಢಗಿ, ಹವಾಲ್ದಾರ ಇದ್ದರು. ಇತರರು ಇದ್ದರು.

ಸಿರಿಧಾನ್ಯ ನಡಿಗೆ, ಸೈಕಲ್ ಜಾಥಾ

ಸಿರಿಧಾನ್ಯ ಮೇಳದ ಅಂಗವಾಗಿ ಜ.24ರಂದು ಬೆಳಿಗ್ಗೆ 6.30 ಗಂಟೆಗೆ ಚನ್ನಮ್ಮ ವೃತ್ತದಿಂದ ‘ಸಿರಿಧಾನ್ಯ ನಡಿಗೆ’ ಹಾಗೂ ಸಂಜೆ 4 ಗಂಟೆಗೆ ‘ಸೈಕಲ್ ಜಾಥಾ’ ನಡೆಯಲಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

ವಿದ್ಯಾರ್ಥಿಗಳು, ವೈದ್ಯರು, ವಕೀಲರು ಸೇರಿದಂತೆ ವಿವಿಧ ಸಂಘ– ಸಂಸ್ಥೆಗಳ ಪದಾಧಿಕಾರಿಗಳು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT