ಬೆಳಗಾವಿ: ತಾಲ್ಲೂಕಿನ ಬೆಳಗುಂದಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಅವ್ಯವಸ್ಥೆ ಕುರಿತು ಗ್ರಾಮಸ್ಥರು ದೂರು ನೀಡಿ, ಸರಿಪಡಿಸಲು ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಬುಧವಾರ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.
ಹಾಸಿಗೆಗಳ ಅಭಾವ, ಶೌಚಾಲಯಗಳ ಕೆಲಸ, ಪ್ಲಂಬರ್ ಕೆಲಸ, ನೀರಿನ ಅನಾನುಕೂಲತೆ, ಕಾಂಪೌಂಡ್ ನಿರ್ಮಾಣ, ಕಿಟಕಿಗಳಿಗೆ ಸೊಳ್ಳೆಯ ಪರದೆ ಅಳವಡಿಕೆ, ಸ್ಟಾಫ್ ನರ್ಸ್ಗಳ ಕೂರತೆ ಮೊದಲಾದವುಗಳ ಬಗ್ಗೆ ಮಾಹಿತಿ ಪಡೆದರು. ಅಧಿಕಾರಿಗಳೊಂದಿಗೆ ಮಾತನಾಡಿ ಸರಿಪಡಿಸುವ ಬಗ್ಗೆ ಗ್ರಾಮಸ್ಥರಿಗೆ ಭರವಸೆ ನೀಡಿದರು.
ಗ್ರಾಮಸ್ಥರು, ವೈದ್ಯಾಧಿಕಾರಿ ರಾಮಕೃಷ್ಣ ಹರಿ, ಮೃಣಾಲ ಹೆಬ್ಬಾಳಕರ, ಮನೋಹರ ಬೆಳಗಾಂವಕರ, ಯುವರಾಜ ಕದಂ, ಮಹೇಶ ಪಾಟೀಲ, ನಾಮದೇವ ಮೋರೆ ಇದ್ದರು.
ಕಿಟ್ ವಿತರಣೆ:
‘ಜೀವದ ಹಂಗು ತೊರೆದು ರೋಗಿಗಳ ಸೇವೆಯಲ್ಲಿ ತೊಡಗಿರುವ ಆಶಾ ಕಾರ್ಯಕರ್ತೆಯರು ಹಾಗೂ ದಾದಿಯರ ಕಾರ್ಯಕ್ಕೆ ಸರಿ ಸಾಟಿ ಇಲ್ಲ’ ಎಂದು ಲಕ್ಷ್ಮಿ ಹೆಬ್ಬಾಳಕರ ಶ್ಲಾಘಿಸಿದರು.
ತಮ್ಮ ಲಕ್ಷ್ಮಿ ತಾಯಿ ಪ್ರತಿಷ್ಠಾನದಿಂದ ಬಿಜಗರಣಿ ಗ್ರಾಮದಲ್ಲಿ ಕೋವಿಡ್– 19 ಹೋಂ ಐಸೊಲೇಷನ್ ಕಿಟ್ಗಳನ್ನು ಬುಧವಾರ ವಿತರಿಸಿ ಅವರು ಮಾತನಾಡಿದರು.
‘ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಅನಗತ್ಯವಾಗಿ ಹೊರಗಡೆ ಬರದೆ ಕುಟುಂಬದವರ ಆರೋಗ್ಯವನ್ನು ಕಾಪಾಡುವ ಸಲುವಾಗಿ ಮನೆಯಲ್ಲೇ ಇರಬೇಕು’ ಎಂದು ಸಲಹೆ ನೀಡಿದರು.