ಬೆಳಗಾವಿ: ‘ನಗರದಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಬೇಕು’ ಎಂದು ಶಾಸಕ ಅನಿಲ ಬೆನಕೆ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಅಧಿಕಾರಿಗಳಿಗೆ ಸೂಚಿಸಿದರು.
ನಗರಕ್ಕೆ ನೀರು ಪೂರೈಸುವ ತಾಲ್ಲೂಕಿನ ರಕ್ಕಸಕೊಪ್ಪ ಜಲಾಶಯದಲ್ಲಿನ ನೀರಿನ ಮಟ್ಟವನ್ನು ಅವರು ಸೋಮವಾರ ಪರಿಶೀಲಿಸಿದರು.
‘ಈ ಜಲಾಶಯದಿಂದ ನಗರಕ್ಕೆ ನಿತ್ಯ 12 ಎಂಜಿಡಿ ನೀರು ಪೂರೈಕೆ ಆಗುತ್ತಿದೆ. ಪ್ರಸ್ತುತ ಇಲ್ಲಿ 0.07 ಟಿಎಂಸಿ ನೀರಿದೆ. ಇದರಲ್ಲಿ ಜೂನ್ 10ರವರೆಗೆ ಸಮರ್ಪಕವಾಗಿ ನೀರು ಒದಗಿಸಬಹುದಾಗಿದೆ. ಜನರು ನೀರನ್ನು ಮಿತವಾಗಿ ಬಳಸಬೇಕು ಮತ್ತು ಪೋಲಾಗದಂತೆ ನಿಗಾ ವಹಿಸಬೇಕು’ ಎಂದು ಕೋರಿದರು.
‘ಈ ತಿಂಗಳಿನಲ್ಲಿ ಉತ್ತಮ ಮಳೆಯಾದರೆ ನಗರಕ್ಕೆ ನೀರು ಸರಬರಾಜು ಮಾಡಲು ಯಾವುದೇ ತೊಂದರೆಯಾಗುವುದಿಲ್ಲ’ ಎಂದು ಮಂಡಳಿಯ ಸಹಾಯಕ ಎಂಜಿನಿಯರ್ ಮಲ್ಲಿಕಾರ್ಜುನ ರಾಚನಾಯ್ಕರ ತಿಳಿಸಿದರು.