ಬೆಳಗಾವಿ: ವ್ಯಕ್ತಿಯನ್ನು ಕೊಲೆ ಮಾಡಿದವಗೆ ಚಿಕ್ಕೋಡಿಯ 7ನೇ ಹೆಚ್ಚುವರಿ ಹಾಗೂ ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು ₹ 35 ಸಾವಿರ ದಂಡ ವಿಧಿಸಿ ಗುರುವಾರ ತೀರ್ಪು ನೀಡಿದೆ.
ಅಥಣಿ ತಾಲ್ಲೂಕಿನ ಅಡಳಟ್ಟಿಯ ಗುರಪ್ಪ ಮುರುಗೆಪ್ಪ ಸವದಿ ಶಿಕ್ಷೆಗೆ ಒಳಗಾದವರು.
‘ಅವರು 2019ರ ಏ.2ರಂದು ಅದೇ ಗ್ರಾಮದ ತುಕಾರಾಮ ಶ್ರೀಮಂತ ಸವದಿ ಎನ್ನುವವರನ್ನು ಕಲ್ಲು, ಕೈ ಹಾಗೂ ಕಾಲಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದರು. ಬಿಡಿಸಲು ಬಂದ ತುಕಾರಾಮ ಅವರ ಪತ್ನಿ ಮಹಾನಂದಾ ಅವರ ಮೇಲೂ ಹಲ್ಲೆ ನಡೆಸಿದ್ದರು. ಈ ಕುರಿತು ಐಗಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ನಡೆಸಿದ ಸಿಪಿಐ ಅಲ್ಲಿಸಾಬ ಇಮಾಮಸಾಬ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಶೇಖು ಎಲ್. ಲಮಾಣಿ ತೀರ್ಪು ನೀಡಿದ್ದಾರೆ. ದಂಡದ ಹಣದಲ್ಲಿ ₹ 30ಸಾವಿರವನ್ನು ಮಹಾನಂದಾ ಅವರಿಗೆ ನೀಡುವಂತೆ ಆದೇಶಿಸಿದ್ದಾರೆ’ ಎಂದು ಸರ್ಕಾರದ ಪರವಾಗಿ ವಾದ ಮಂಡಿಸಿದ ಅಭಿಯೋಜಕ ಎಸ್.ಆರ್. ಪಾಟೀಲ ತಿಳಿಸಿದ್ದಾರೆ.