ಬೆಳಗಾವಿ: ‘ನಗರದಲ್ಲಿ ನಡೆಯುವ ನಾಡಹಬ್ಬ ಆಚರಣೆಗೆ ರಾಜ್ಯ ಸರ್ಕಾರದಿಂದ ಅನುದಾನ ಕೊಡಿಸಲು ಯತ್ನಿಸುತ್ತೇನೆ’ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಆಂಗಡಿ ಭರಸೆ ನೀಡಿದರು.
ಇಲ್ಲಿನ ಕನ್ನಡ ಸಾಹಿತ್ಯ ಭವನ ಆವರಣದಲ್ಲಿ ಮಂಗಳವಾರ ಆರಂಭವಾದ 92ನೇ ನಾಡಹಬ್ಬ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಅನೇಕ ಸಂಕಷ್ಟಗಳ ನಡುವೆಯೂ ಗಡಿ ನಾಡಿನಲ್ಲಿ 92 ವರ್ಷಗಳಿಂದ ನಾಡಹಬ್ಬ ಆಚರಿಸುತ್ತಾ ಬಂದಿರುವುದು ಶ್ಲಾಘನೀಯ. ನಾನು ಈ ಸಮಿತಿ ಅಧ್ಯಕ್ಷನಾಗಿ ಆಯ್ಕೆಯಾದ ವರ್ಷವೇ ಸಂಸದನಾದೆ. ಅ. 3ರಂದು ಮುಖ್ಯಮಂತ್ರಿ ಬೆಳಗಾವಿಗೆ ಬರುತ್ತಾರೆ. ಅನುದಾನಕ್ಕೆ ಸಂಬಂಧಿಸಿದಂತೆ ಅವರಿಗೆ ಮನವಿ ಸಲ್ಲಿಸೋಣ’ ಎಂದು ಆಯೋಜಕರಿಗೆ ತಿಳಿಸಿದರು.
‘ನಾಡಹಬ್ಬದಂತಹ ಕಾರ್ಯಕ್ರಮಗಳಲ್ಲಿ ಯುವ ಸಮೂಹ, ಶಾಲಾ–ಕಾಲೇಜು ವಿದ್ಯಾರ್ಥಿ ಹೆಚ್ಚಾಗಿ ಭಾಗವಹಿಸಬೇಕು. ನಾಡಿನ ಪರಂಪರೆಯನ್ನು ಅವರಿಗೆ ಪರಿಚಯಿಸಬೇಕು’ ಎಂದರು.
ಸಾನ್ನಿಧ್ಯ ವಹಿಸಿದ್ದ ತೋಂಟದ ಸಿದ್ಧರಾಮ ಸ್ವಾಮೀಜಿ ಮಾತನಾಡಿ, ‘ಗಡಿಯಲ್ಲಿ ಕನ್ನಡ ಉಳಿಸಿ–ಬೆಳೆಸುವಲ್ಲಿ ನಾಡಹಬ್ಬದ ಪಾತ್ರ ಹಿರಿದಾಗಿದೆ. ಸರ್ಕಾರ ಆರ್ಥಿಕ ನೆರವು ಕೊಟ್ಟು ಸಹಕರಿಸಬೇಕು’ ಎಂದು ಒತ್ತಾಯಿಸಿದರು.
ಡಾ.ಮಹೇಶ್ ಜೋಶಿ, ಸಮಿತಿಯ ಪ್ರಧಾನ ಕಾರ್ಯದರ್ಶಿ ಸಿ.ಕೆ. ಜೋರಾಪುರ ಪ್ರಾಸ್ತಾವಿಕ ಮಾತನಾಡಿದರು.
ಅಧ್ಯಕ್ಷ ಡಾ.ಎಚ್.ಬಿ. ರಾಜಶೇಖರ, ಸಮಾಜ ಸೇವಕಿ ಸರಳಾ ಹೆರೇಕರ, ಡಾ.ಎಚ್.ಐ. ತಿಮ್ಮಾಪುರ ಇದ್ದರು.