ಗೋಕಾಕ: ‘ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರವನ್ನೂ ನೀಡಿ ಅವರನ್ನು ಉತ್ತಮ ನಾಗರಿಕರನ್ನಾಗಿ ಮಾಡುವ ಜವಾಬ್ದಾರಿ ಪಾಲಕರ ಮೇಲಿದೆ’ ಎಂದು ಇಲ್ಲಿನ ದಿಗಂಬರ ಜೈನ ಸಮಾಜದ ಅಧ್ಯಕ್ಷ ವಿಜಯಕುಮಾರ ಖಾರೆಪಾಟಣ ಹೇಳಿದರು.
ಭಾನುವಾರ ಇಲ್ಲಿನ ಪಾಯಸಾಗರ ಶಿಕ್ಷಣ ಸಂಸ್ಥೆಯ ಮಹಾವೀರ ಭವನದಲ್ಲಿ ದಿಗಂಬರ ಜೈನ ಸಮಾಜದಿಂದ ಆಯೋಜಿಸಿದ್ದ ಜ್ಞಾನ ಜ್ಯೋತಿ ಶಿಬಿರ ಹಾಗೂ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಇಂದು ಮಕ್ಕಳನ್ನು ಅಂಕ ಗಳಿಸುವ ಯಂತ್ರಗಳನ್ನಾಗಿ ಮಾಡುವ ಜೊತೆಗೆ ಅವರ ಮೇಲೆ ಒತ್ತಡ ಹೇರಲಾಗುತ್ತಿದೆ. ಅವರಲ್ಲಿ ಹುದಿಗುರುವ ಸುಪ್ತ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಶಿಕ್ಷಣದೊಂದಿಗೆ ಅಧ್ಯಾತ್ಮವನ್ನೂ ಅವರಲ್ಲಿ ಕಲಿಸಿ ಅವರನ್ನು ಪರಿಪೂರ್ಣ ವ್ಯಕ್ತಿಗಳನ್ನಾಗಿ ರೂಪಿಸಬೇಕು’ ಎಂದು ಸಲಹೆ ನೀಡಿದರು.
ಶಿಕ್ಷಕ ಬಿ.ಎಸ್. ಜೋಲಾಪೂರೆ ಮಾತನಾಡಿದರು. ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ಸ್ವಾಮಿ ವಿವೇಕಾನಂದರ ಕುರಿತು ನಡೆಸಿದ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.