ಉಗರಗೋಳ (ಸವದತ್ತಿ ತಾ.): ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡದರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವಕ್ಕೆ ಶನಿವಾರ ಚಾಲನೆ ನೀಡಲಾಯಿತು.
ಘಟಸ್ಥಾಪನೆ ಕಾರ್ಯಕ್ರಮದಲ್ಲಿ ವಿಧಾನಸಭೆ ಉಪಸಭಾಧ್ಯಕ್ಷ ಹಾಗೂ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಆನಂದ ಮಾಮನಿ, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ದೀಪಕ್ಕೆ ಎಣ್ಣೆ ಹಾಕುವ ಮೂಲಕ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಮಾಮನಿ, ‘ವಿಶ್ವವಿಖ್ಯಾತ ಮೈಸೂರು ದಸರಾ ಸೇರಿ ಎಲ್ಲ ಉತ್ಸವಗಳನ್ನು ಸರ್ಕಾರ ಈ ಬಾರಿ ಸರಳವಾಗಿ ಆಚರಿಸುತ್ತಿದೆ. ಪವಿತ್ರ ಸ್ಥಳ ಯಲ್ಲಮ್ಮನ ಸನ್ನಿಧಿಯಲ್ಲೂ ನವರಾತ್ರಿ ಉತ್ಸವ ಸರಳವಾಗಿರಲಿದೆ. ಭಕ್ತರು ಇದಕ್ಕೆ ಸಹಕಾರ ನೀಡಬೇಕು. ಆದಿಶಕ್ತಿಯು ದೇಶವನ್ನು ಕೊರೊನಾ ಸಂಕಷ್ಟದಿಂದ ಮುಕ್ತಗೊಳಿಸಲಿ’ ಎಂದು ಹೇಳಿದರು.
‘ಕೋವಿಡ್ ಹಾವಳಿ ತಗ್ಗಿದ ನಂತರ ಯಲ್ಲಮ್ಮನಗುಡ್ಡದಲ್ಲಿ ಅಭಿವೃದ್ಧಿ ಕೆಲಸ ಚುರುಕುಗೊಳಿಸುತ್ತೇವೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಗಂಗಮ್ಮತಾಯಿ ಮಾಮನಿ, ಸವದತ್ತಿ ತಹಶೀಲ್ದಾರ್ ಪ್ರಶಾಂತ ಪಾಟೀಲ, ಯಲ್ಲಮ್ಮ ದೇವಸ್ಥಾನ ಇಒ ರವಿ ಕೋಟಾರಗಸ್ತಿ, ಎಇಒ ಅರವಿಂದ ಮಾಳಗೆ, ಸಿ.ಎಸ್. ಪಟ್ಟಣಶೆಟ್ಟಿ, ಎಂ.ವಿ. ಮುಳ್ಳೂರ, ಅಲ್ಲಮಪ್ರಭು ಪ್ರಭುನವರ, ಪ್ರಕಾಶ ಪ್ರಭುನವರ, ವರ್ಷಾ ಗಾಂವಕರ, ಅರ್ಚಕರು ಹಾಗೂ ಸಿಬ್ಬಂದಿ ಇದ್ದರು.