ಬೆಳಗಾವಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ (ಎನ್ಸಿಪಿ) ಜಿಲ್ಲಾ ಘಟಕದ ಕಾರ್ಯಕರ್ತರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
‘ರಾಜ್ಯದಲ್ಲಿ ಬಿಪಿಎಲ್ ಪಡಿತರ ಚೀಟಿ ಪಡೆದಿರುವವರ ಮಕ್ಕಳು ಖಾಸಗಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕೋವಿಡ್–19 ಲಾಕ್ಡೌನ್ನಿಂದಾಗಿ ಪೋಷಕರು ಕೆಲಸಕ್ಕೆ ಹೋಗದೆ ಗಳಿಕೆ ಇಲ್ಲದಾಗಿದೆ. ಹಲವರು ಉದ್ಯೋಗ ಕಳೆದುಕೊಂಡಿದ್ದಾರೆ. ಇದರಿಂದ ಮಕ್ಕಳ ಭವಿಷ್ಯ ಅತಂತ್ರವಾಗಿದೆ. ಹೀಗಾಗಿ, ಈ ಮಕ್ಕಳ 2020–21ನೇ ಸಾಲಿನ ಶುಲ್ಕವನ್ನು ಸರ್ಕಾರದಿಂದ ಭರಿಸಬೇಕು’ ಎಂದು ಜಿಲ್ಲಾ ಘಟಕದ ಅಧ್ಯಕ್ಷ ರಾಜು ಮಹದೇವ ಪಾಟೀಲ ಒತ್ತಾಯಿಸಿದರು.
‘ಕೊರೊನಾ ವಾರಿಯರ್ಗಳಿಗೆ ಪ್ರತಿ ತಿಂಗಳೂ ಸಕಾಲಕ್ಕೆ ವೇತನ ನೀಡಬೇಕು. ಅವರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು. ದರ್ಜಿಗಳು, ಕೈಮಗ್ಗಗಳಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರು, ಬ್ಯೂಟಿಪಾರ್ಲರ್ನವರು, ಬ್ಯಾಂಡ್ ತಂಡದವರಿಗೆ ಆರ್ಥಿಕ ನೆರವು ನೀಡಬೇಕು. ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸದೆ ಆಡಳಿತಾಧಿಕಾರಿಗಳನ್ನು ನೇಮಿಸಬೇಕು. ನಗರ ಸ್ಥಳೀಯ ಸಂಸ್ಥೆಗಳಿಂದ ತೆರಿಗೆ ಪರಿಷ್ಕರಣೆ ಪ್ರಕ್ರಿಯೆಯನ್ನು ಈ ಬಾರಿ ರದ್ದುಪಡಿಸಬೇಕು’ ಎಂದು ಆಗ್ರಹಿಸಿದರು.
ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಅಮೋಲ್ ದೇಸಾಯಿ, ಕಾರ್ಯಕರ್ತರಾದ ದುರ್ಗೇಶ್ ಮೇತ್ರಿ, ಧನಪಾಲ್ ಅಗಸಿಮನಿ, ನಾರಾಯಣ ಬಸುರ್ಗೆ, ಜೆ.ಪಾಟೀಲ, ಶಿವಾಜಿ ಎಂ. ಲಾಡ್ ಪಾಲ್ಗೊಂಡಿದ್ದರು.