ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ ಬೆಲ್ಲ ಆಯ್ಕೆಗೆ ಚಿಂತನೆ: ಜಿಲ್ಲಾಧಿಕಾರಿ

ಆತ್ಮ ನಿರ್ಭರ ಭಾರತ ಅಭಿಯಾನ- ಒಂದು ಜಿಲ್ಲೆ; ಒಂದು ಉತ್ಪನ್ನ
Last Updated 5 ಆಗಸ್ಟ್ 2020, 10:25 IST
ಅಕ್ಷರ ಗಾತ್ರ

ಬೆಳಗಾವಿ: ‘ಜಿಲ್ಲೆಯ ಸಾವಯವ ಬೆಲ್ಲ ಉತ್ಪಾದನಾ ಘಟಕಗಳಿಗೆ ಅತ್ಯುತ್ತಮ ಬ್ರ್ಯಾಂಡ್ ಸೃಷ್ಟಿಸಲು ಹಾಗೂ ಅಂತರಾಷ್ಟ್ರೀಯ ಮಾರುಕಟ್ಟೆ ಒದಗಿಸಲು ಅವಕಾಶಗಳಿವೆ. ಅದಕ್ಕಾಗಿ, ಆತ್ಮನಿರ್ಭರ ಭಾರತ ಅಭಿಯಾನದಡಿ ಒಂದು ಜಿಲ್ಲೆ; ಒಂದು ಉತ್ಪನ್ನವನ್ನಾಗಿ ಬೆಲ್ಲವನ್ನು ಆಯ್ಕೆ ಮಾಡಲು ಪರಿಶೀಲಿಸಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹೇಳಿದರು.

ಆತ್ಮ ನಿರ್ಭರ ಭಾರತ ಅಭಿಯಾನದ ಕುರಿತು ನಗರದ ತಮ್ಮ ಕಚೇರಿಯ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ಕೃಷಿ, ವಾಣಿಜ್ಯ,ಆಹಾರ ಸಂಸ್ಕರಣೆ ಮತ್ತು ಕೃಷಿ ರಫ್ತು ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಒಂದು ಜಿಲ್ಲೆ; ಒಂದು ಉತ್ಪನ್ನ (ಒಡಿಪಿಒ) ಅಭಿಯಾನದ ಪ್ರಮುಖ ಅಂಶವೆಂದರೆ ಜಿಲ್ಲೆಯ ಪ್ರಮುಖ ಬೆಳೆ, ಉತ್ಪನ್ನವನ್ನು ಗುರುತಿಸಿ ಈ ಬೆಳೆಯ ಮೌಲ್ಯವರ್ಧನೆ, ಸಂಸ್ಕರಣೆ, ಪ್ಯಾಕಿಂಗ್, ಬ್ರಾಂಡ್ ಅಭಿವೃದ್ಧಿ, ಮಾರುಕಟ್ಟೆಗೆ ಪ್ರೋತ್ಸಾಹಿಸಬಹುದಾಗಿದೆ. ಬೆಲ್ಲ ತಯಾರಿಕಾ ಘಟಕಗಳನ್ನು ಮೊದಲು ಗುರುತಿಸಿ ಎಲ್ಲ ಆಯಾಮಗಳಲ್ಲಿ ಪರಿಶೀಲಿಸಿದ ಬಳಿಕ ಅಂತಿಮವಾಗಿ ಆಯ್ಕೆ ಮಾಡಲಾಗುವುದು’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ ಹಾಲು, ಅರಿಶಿನ, ಮಾವು ಇತ್ಯಾದಿ ಸಂಸ್ಕರಣೆ ಘಟಕಗಳ ಸ್ಥಾಪನೆಗೂ ಉತ್ತಮ ಅವಕಾಶಗಳಿವೆ. ಇವುಗಳಲ್ಲಿ ಮಾವು ಸಂಸ್ಕರಣೆ ಘಟಕಗಳ ಮೂಲಕ ವಿವಿಧ ಉಪ ಉತ್ಪನ್ನಗಳ ತಯಾರಿಕೆಗೂ ವಿಫುಲ ಅವಕಾಶಗಳಿವೆ. ಕೃಷಿಯೇತರ ಜಮೀನಿನಲ್ಲಿ ಸ್ಥಾಪಿತ ಘಟಕಗಳಿಗೆ ಮಾತ್ರ ಸಾಲಸೌಲಭ್ಯ ದೊರಕುವುದರಿಂದ ಬೆಲ್ಲ ಅಥವಾ ಎರಡನೇ ಆಯ್ಕೆಯಾಗಿ ಅರಿಶಿನ ಸಂಸ್ಕರಣಾ ಘಟಕವನ್ನು ಆಯ್ಕೆ ಮಾಡುವಾಗ ನಬಾರ್ಡ್, ಇತರೆ ಹಣಕಾಸು ಸಂಸ್ಥೆಗಳ ಜತೆ ಚರ್ಚಿಸಿದ ಬಳಿಕವೇ ತೀರ್ಮಾನ ಮಾಡಲಾಗುವುದು’ ಎಂದು ನುಡಿದರು.

‘ಮುಂಬರುವ ದಿನಗಳಲ್ಲಿ ಬ್ಯಾಂಕುಗಳಿಂದ ಸರಳವಾಗಿ ಸಾಲಸೌಲಭ್ಯ ಒದಗಿಸಲು ಸಾಧ್ಯವಾಗುವಂತಹ ಆಹಾರ ಸಂಸ್ಕರಣೆ ಘಟಕಗಳನ್ನು ಆಯ್ಕೆ ಮಾಡುವುದರಿಂದ ಅಭಿವೃದ್ಧಿ ಸುಲಭವಾಗುತ್ತದೆ’ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಎಚ್.ವಿ. ಅಭಿಪ್ರಾಯಪಟ್ಟರು.

ಅಭಿಯಾನ ಕುರಿತು ಪ್ರಾತ್ಯಕ್ಷಿಕೆ ನೀಡಿದ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ‘ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಮನ್ವಯದೊಂದಿಗೆ ಈ ಯೋಜನೆ ಅನುಷ್ಠಾನಗೊಳಿಸಲಾಗುತ್ತದೆ’ ಎಂದರು.

‘ಮೈಸೂರು ಸಿಎಫ್‌ಟಿಆರ್‌ಐನಲ್ಲಿ ಬೆಲ್ಲದ ಪುಡಿ, ದ್ರವ ರೂಪದ ಬೆಲ್ಲದ ಬಗ್ಗೆ ತಂತ್ರಜ್ಞಾನ ಲಭ್ಯವಿದ್ದು, ಇದನ್ನು ಜಿಲ್ಲೆಯಲ್ಲಿ ಬಳಸಿಕೊಳ್ಳಬಹುದು’ ಎಂದು ತುಕ್ಕಾನಟ್ಟಿ ಕೆವಿಕೆ ವಿಜ್ಞಾನಿ ಡಿ.ಸಿ.ಚೌಗಲಾ ಸಲಹೆ ನೀಡಿದರು.

ಎಫ್‌ಪಿಒ: ‘ಸರ್ಕಾರದ ಮಾರ್ಗಸೂಚಿ ಪ್ರಕಾರ ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆ ಮತ್ತು ನಬಾರ್ಡ್ ವತಿಯಿಂದ ರೈತ ಉತ್ಪಾದಕರ ಸಂಸ್ಥೆಗಳನ್ನು (ಎಫ್.ಪಿ.ಒ) ಸ್ಥಾಪಿಸುವ ಮೂಲಕ ರೈತರ ಆರ್ಥಿಕ ಪ್ರಗತಿಗೆ ನೆರವಾಗಬೇಕು’ ಎಂದು ಜಿಲ್ಲಾಧಿಕಾರಿ ಹಿರೇಮಠ ತಿಳಿಸಿದರು.

‘ಜಿಲ್ಲೆಯಲ್ಲಿ 20 ರೈತ ಉತ್ಪಾದಕರ ಸಂಸ್ಥೆಗಳ ರಚನೆಯ ಗುರಿ ನೀಡಲಾಗಿದ್ದು, ಈ‌ ನಿಟ್ಟಿನಲ್ಲಿ ಈಗಾಗಲೇ ಕೆಲಸ ಆರಂಭಿಸಲಾಗಿದೆ. ಬೈಲಹೊಂಗಲ, ನೇಸರಗಿ, ಬೀಡಿ ಸೇರಿದಂತೆ ಐದು ಹೋಬಳಿಗಳಲ್ಲಿ ರೈತ ಉತ್ಪಾದಕರ ಸಂಸ್ಥೆಗಳನ್ನು ರಚಿಸಲಾಗಿದೆ. ಆಯಾ ಭಾಗದ ಪ್ರಮುಖ ಬೆಳೆಯ ಬೆಳೆಗಾರರನ್ನು ಸಂಸ್ಥೆಯ ಸದಸ್ಯರನ್ನಾಗಿ ಆಯ್ಕೆ ಮಾಡಿ‌ ತರಬೇತಿ, ಮಾರುಕಟ್ಟೆ ಮಾಹಿತಿ ಒದಗಿಸಲಾಗುವುದು’ ’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಹೊಸಮನಿ ತಿಳಿಸಿದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ದೊಡ್ಡಬಸವರಾಜ, ಕೃಷಿ ಇಲಾಖೆಯ ಉಪ ನಿರ್ದೇಶಕ ಡಾ.ಎಚ್.ಡಿ.ಕೋಳೇಕರ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ರವೀಂದ್ರ ಹಕಾಟಿ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ರಾಹುಲ್, ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT