ಬೆಳಗಾವಿ: ‘ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ವಿಭಜಿಸಿ, ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ರಚಿಸಬೇಕು’ ಎಂದು ಒತ್ತಾಯಿಸಿ ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟ–ಅಭಿವೃದ್ಧಿ ವೇದಿಕೆಯವರು ತಾಲ್ಲೂಕಿನ ಹಲಗಾದ ಸುವರ್ಣ ವಿಧಾನಸೌಧ ಬಳಿ ಗುರುವಾರ ಪ್ರತಿಭಟಿಸಿದರು.
‘ಪ್ರತ್ಯೇಕವಾಗಿದ್ದ ಹುಬ್ಬಳ್ಳಿ, ಧಾರವಾಡ ನಗರಸಭೆಗಳನ್ನು ವಿಲೀನಗೊಳಿಸಿ, 1962ರಲ್ಲಿ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ರಚಿಸಲಾಗಿದೆ. ಆದರೆ, ಈಗ ಪಾಲಿಕೆ ವ್ಯಾಪ್ತಿ ವಿಸ್ತಾರಗೊಂಡಿದೆ. ಎರಡೂ ನಗರಗಳಲ್ಲಿನ ಜನಸಂಖ್ಯೆ ಬೆಳೆದಿದೆ. ವಸತಿ ಬಡಾವಣೆಗಳು, ವ್ಯಾಪಾರ ಉದ್ದಿಮೆಗಳು, ವಾಣಿಜ್ಯ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಹೆಚ್ಚಿವೆ. ಅವಳಿ ನಗರಗಳಿಗೆ ಬೇಡಿಕೆಯಷ್ಟು ಮೂಲಸೌಕರ್ಯ ಒದಗಿಸಲು ಪಾಲಿಕೆಯೂ ಪರದಾಡುತ್ತಿದೆ. ಅದರಲ್ಲೂ ಪಾಲಿಕೆ ಆಡಳಿತ ಹುಬ್ಬಳ್ಳಿ ಕೇಂದ್ರಿತವಾಗಿದ್ದು, ಧಾರವಾಡ ಕಡೆಗಣನೆಗೆ ಒಳಗಾಗಿದೆ. ಸ್ಮಾರ್ಟ್ಸಿಟಿ ಯೋಜನೆ ಸೇರಿದಂತೆ ಹಲವು ಅಭಿವೃದ್ಧಿ ಕೆಲಸಗಳೂ ಹುಬ್ಬಳ್ಳಿ ಕೇಂದ್ರಿತವಾಗಿವೆ. ಹಾಗಾಗಿ ಈ ಪಾಲಿಕೆ ವಿಭಜಿಸಿ, ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ರಚಿಸಬೇಕು’ ಎಂದು ಆಗ್ರಹಿಸಿದರು.
‘ಐತಿಹಾಸಿಕ, ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಜಿಲ್ಲಾ ಕೇಂದ್ರವಾಗಿ ಬೆಳೆದಿರುವ ಧಾರವಾಡವು ಪ್ರತ್ಯೇಕ ಪಾಲಿಕೆಯಾಗಲು ಎಲ್ಲ ಅರ್ಹತೆ ಹೊಂದಿದೆ. ಸರ್ಕಾರದ ನಿರ್ಲಕ್ಷ್ಯದಿಂದಾಗಿ ಈಗ ಹಲವು ಮೂಲಸೌಲಭ್ಯಗಳ ಕೊರತೆಯಿಂದ ಬಳಲುತ್ತಿದೆ’ ಎಂದು ದೂರಿದರು.
ವೇದಿಕೆ ಅಧ್ಯಕ್ಷ ವೆಂಕಟೇಶ ಮಾಚಕನೂರ, ವಿಠ್ಠಲ ಕಮ್ಮಾರ, ಶಂಕರ ನೀರಾವರಿ, ರವಿಕುಮಾರ ಮಾಳಿಗೇರ ಇತರರಿದ್ದರು.