ಬೆಳಗಾವಿ: ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಹಿರೇಕೋಡಿಯಲ್ಲಿ ಈಚೆಗೆ ಮದುವೆಯಲ್ಲಿ ಕಲುಷಿತ ಆಹಾರ ಸೇವಿಸಿ, ಪಾರ್ಶ್ವವಾಯು ಪೀಡಿತರಾಗದ್ದ ಶಬ್ಬೀರ್ ಮಕಾನದಾರ (58) ಅವರು ಸೋಮವಾರ ಮೃತಪಟ್ಟರು.
ಶಬ್ಬೀರ್ ಅವರು ಹಿರೇಕೋಡಿಯಲ್ಲಿ ಆಗಸ್ಟ್ 28ರಂದು ನಡೆದ ಮದುವೆ ಸಮಾರಂಭದಲ್ಲಿ ಕಲುಷಿತ ಮಾಂಸಾಹಾರ ಸೇವಿಸಿದ್ದರು. ನಿರಂತರ ವಾಂತಿ– ಭೇದಿಯಿಂದಾಗಿ ಅವರ ದೇಹ ನಿರ್ಜಲೀಕರಣಗೊಂಡಿತ್ತು. ಇದರಿಂದ ರಕ್ತದೊತ್ತಡ ಕುಸಿದು, ಪಾರ್ಶ್ವವಾಯು ಉಂಟಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಐದು ದಿನ ಸಾವು– ಬದುಕಿನ ಮಧ್ಯೆ ಹೊರಾಟ ನಡೆಸಿದ ಅವರು, ಸೋಮವಾರ ಸಂಜೆ ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದರು ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಎ.ಬಿ.ಪಾಟೀಲ ತಿಳಿಸಿದರು.
ಕಲುಷಿತ ಆಹಾರ ಸೇವನೆಯ ಕಾರಣ ಕುರುಡುತನ ಉಂಟಾದ ಬಾಬಾಸಾಬ್ ಕುತುಮುದ್ದೀನ್ ಬೇಗ್ (37) ಅವರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ. ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದರಿಂದ ಅವರ ದೃಷ್ಟಿಯಲ್ಲಿ ಸುಧಾರಣೆ ಕಂಡುಬಂದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ವಾಂತಿ– ಭೇದಿಯಿಂದ ನಿತ್ರಾಣಗೊಂಡಿದ್ದ ಉಳಿದ 158 ಮಂದಿ ಆರೋಗ್ಯವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.