ಅಕ್ಕ ಮಹಾದೇವಿ ವೇದಿಕೆ (ಬೆಳಗಾವಿ): ‘ಶರಣ ತತ್ವಗಳನ್ನು ಹೇಳುವ, ಮೀಸಲಾತಿಗಾಗಿ ಹೋರಾಡುವ ಕೆಲವು ಸ್ವಾಮೀಜಿಗಳೇ ಜ.22ರಂದು ಮಂದಿರ ಉದ್ಘಾಟನೆಗೆ ಹೋಗಿ ನಿಂತರು. ಅವರಿಗೆ ನಾನು ಧಿಕ್ಕಾರ ಹೇಳುತ್ತೇನೆ’ ಎಂದು ಅಥಣಿ ಮೋಟಗಿ ಮಠದ ಪ್ರಭುಚನ್ನಬಸವ ಸ್ವಾಮೀಜಿ ಗುಡುಗಿದರು.
ಜಾಗತಿಕ ಲಿಂಗಾಯತ ಮಹಾಸಭೆಯಿಂದ ನಗರದಲ್ಲಿ ಶನಿವಾರ ಆಯೋಜಿಸಿದ್ದ ಎರಡು ದಿನಗಳ ರಾಷ್ಟ್ರೀಯ ಪ್ರಥಮ ಮಹಿಳಾ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಸನಾತನ ಧರ್ಮದಲ್ಲಿ ಹುಟ್ಟಿದ್ದು ನನ್ನ ತಪ್ಪಲ್ಲ; ಈ ಧರ್ಮದಲ್ಲಿ ಹೆಣ್ಣಾಗಿ ಹುಟ್ಟಿದ್ದು ನನ್ನ ತಪ್ಪು’ ಎಂದು ಸೀತಾಮಾತೆಯೇ ಹೇಳಿದ್ದಾಳೆ. ಧರ್ಮದೊಳಗಿನ ಸೂಕ್ಷ್ಮತೆಯನ್ನು ಮಹಿಳೆಯರು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಸ್ವತಂತ್ರವಾದ ಲಿಂಗಾಯತ ಧರ್ಮವನ್ನೇ ಪಾಲಿಸಬೇಕು’ ಎಂದರು.
ಆಡಿ– ಹಂದಿಗುಂದದ ಸಿದ್ಧೇಶ್ವರ ಮಠಾಧೀಶ ಶಿವಾನಂದ ಸ್ವಾಮೀಜಿ ಮಾತನಾಡಿ, ‘ಕಾವಿ ಹಾಕಿಕೊಂಡವರು ಸಮಾಜ ಒಡೆಯುವ ಕೆಲಸ ಮಾಡಬಾರದು. ಲಿಂಗಾಯತ ಧರ್ಮ ಪಾಲನೆ ಸಾಧ್ಯವಾಗದಿದ್ದರೆ ಕಾವಿ ಬಿಚ್ಚು, ಪೀಠವನ್ನು ತ್ಯಾಗ ಮಾಡಬೇಕು’ ಎಂದರು.
‘ಕೊಂಡಿ ಮಂಚಣ್ಣ ಎಂಬಾತ ಬಸವಣ್ಣನವರಿಗೆ ನಿಂದಕನಾಗಿದ್ದ. ಈಗ ವೀರಶೈವ– ಲಿಂಗಾಯತ ಒಂದೇ ಎಂದು ಯಾರು ಹೇಳುತ್ತಾರೋ ಅವರೇ ಕೊಂಡಿ ಮಂಚಣ್ಣ’ ಎಂದೂ ವಾದಿಸಿದರು.