ನಗರಸಭೆ ವ್ಯಾಪ್ತಿಯ ಘಟಪ್ರಭಾ ನದಿ ದಂಡೆಯ ಕಿಲ್ಲಾ, ಕುಂಬಾರ ಓಣಿ, ಡೋರಗಲ್ಲಿ, ಉಪ್ಪಾರ ಓಣಿ, ವಡ್ಡರ ಓಣಿ, ಗರಡಿ ಓಣಿ, ಗುರುವಾರ ಪೇಟೆ ಭಾಗಶಃ ಸೇರಿದಂತೆ ಅನೇಕ ಪ್ರದೇಶಗಳ ನಿವಾಸಿಗಳ ಆಸ್ತಿಪಾಸ್ತಿ ನೀರಿನಲ್ಲಿ ಕೊಚ್ಚಿ ಹೋಗಿದೆ. ಘಟಪ್ರಭಾ ನದಿ ಹಿಂದೆಂದೂ ಕಂಡರಿಯದ ಪ್ರವಾಹ ಹೊತ್ತು ತಂದು, ಎಲ್ಲರ ಬಾಳನ್ನೂ ಮಣ್ಣಾಗಿಸಿದೆ. ಮಣ್ಣಿನಿಂದ ನಿರ್ಮಿತವಾದ ಬಹುತೇಕ ಮನೆಗಳು ಸಂಪೂರ್ಣ ನೆಲಕಚ್ಚಿದ್ದರಿಂದ ಅವರೆಲ್ಲರ ಬದುಕು ಮೂರಾಬಟ್ಟೆಯಾಗಿ ಪರಿಣಮಿಸಿದೆ. ಬೀದಿಗೆ ಬಿದ್ದಿರುವ ಅವರು, ಪುನರ್ವಸತಿಯ ನಿರೀಕ್ಷೆಯಲ್ಲಿದ್ದಾರೆ.