ಬೆಳಗಾವಿ (ಸುವರ್ಣ ವಿಧಾನಸೌಧ): ಮತಾಂತರ ನಿಷೇಧ ಮಸೂದೆ ಅಂಗೀಕಾರಕ್ಕೆ ಬೆಂಬಲದ ಕೊರತೆ ಇರುವುದರಿಂದ ವಿಧಾನ ಪರಿಷತ್ ಕಲಾಪ ಆರಂಭಿಸದೇ ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿಕಾಂಗ್ರೆಸ್ ಸದಸ್ಯರು ಸಭಾಪತಿ ಕೊಠಡಿಗೆ ತೆರಳಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಮಧ್ಯಾಹ್ನದ ವಿರಾಮದ ಬಳಿಕ ಕಲಾಪ 3 ಗಂಟೆಗೆ ಮುಂದೂಡಲಾಗಿತ್ತು. 4 ಗಂಟೆಯಾದರೂ ಕೋರಂ ಬೆಲ್ ಹಾಕಿರಲಿಲ್ಲ.
ಬಿಜೆಪಿಗೆ ಸದಸ್ಯ ಬಲದ ಕೊರತೆ ಇದೆ. ಉಪ ಸಭಾಪತಿ ಎಂ.ಕೆ. ಪ್ರಾಣೇಶ್ ಸೇರಿದಂತೆ ಕೆಲವು ಸದಸ್ಯರು ಬೆಳಗಾವಿಯಿಂದ ಹೊರಟು ಹೋಗಿದ್ದಾರೆ. ಅವರಿಗೆ ವಾಪಸ್ ಸುವರ್ಣ ವಿಧಾನಸೌಧಕ್ಕೆ ಹಿಂದಿರುಗುವಂತೆ ಆಡಳಿತ ಪಕ್ಷದಿಂದ ತುರ್ತು ಸಂದೇಶ ರವಾನಿಸಲಾಗಿದೆ.
ನೂರಾರು ಕಿಲೋಮೀಟರ್ ದೂರ ತಲುಪಿರುವ ಅವರಿಗಾಗಿ ಕಾದು ಕುಳಿತಿದ್ದರು. 3.45ರ ಸುಮಾರಿಗೆ ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಆಡಳಿತ ಪಕ್ಷದ ಹಲವರು ಸಭಾಪತಿ ಬಸವರಾಜ ಹೊರಟ್ಟಿಯವರ ಕೊಠಡಿಯಲ್ಲಿ ಸೇರಿದ್ದರು.
ಅಷ್ಟರಲ್ಲಿ ಸಭಾಪತಿ ಕೊಠಡಿಗೆ ಧಾವಿಸಿದ ಕಾಂಗ್ರೆಸ್ ಸದಸ್ಯರು ಕಲಾಪ ವಿಳಂಬ ಮಾಡುತ್ತಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸಭಾಪತಿಯವರ ಕೊಠಡಿಯಲ್ಲಿ ಕೋಲಾಹಲದ ವಾತಾವರಣ ನಿರ್ಮಾಣ ಸೃಷ್ಟಿಯಾಯಿತು. ಅಷ್ಟರಲ್ಲಿ ಕೋರಂ ಬೆಲ್ ಹಾಕಲಾಯಿತು.
ಈ ವಿಧಾನ ಪರಿಷತ್ ಕಲಾಪ ಆರಂಭವಾಗಿದೆ. ತಮ್ಮ ಸದಸ್ಯರೂ ಸದನಕ್ಕೆ ಬರಬೇಕಿದ್ದು, ಕಲಾಪವನ್ನು ಶನಿವಾರಕ್ಕೆ ಮುಂದೂಡುವಂತೆ ಕಾಂಗ್ರೆಸ್ ಸದಸ್ಯರು ಪಟ್ಟು ಹಿಡಿದಿದ್ದಾರೆ.