ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದಕ್ಷಿಣ ಕ್ಷೇತ್ರ’ದಲ್ಲಿ ಸತೀಶ ಸಂಚಾರ

ಸ್ಥಳೀಯರ ಸಮಸ್ಯೆ ಆಲಿಕೆ; ಕಾರ್ಯಕರ್ತರ ಭೇಟಿ
Last Updated 8 ಅಕ್ಟೋಬರ್ 2021, 12:42 IST
ಅಕ್ಷರ ಗಾತ್ರ

ಬೆಳಗಾವಿ: ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಯಮಕನಮರಡಿ ಕ್ಷೇತ್ರದ ಶಾಸಕ ಸತೀಶ ಜಾರಕಿಹೊಳಿ ಅವರು ಬಿಜೆಪಿಯ ಅಭಯ ಪಾಟೀಲ ಪ್ರತಿನಿಧಿಸುತ್ತಿರುವ ಇಲ್ಲಿನ ದಕ್ಷಿಣ ಮತಕ್ಷೇತ್ರದ ವಿವಿಧ ವಾರ್ಡ್‌ಗಳಿಗೆ ಶುಕ್ರವಾರ ಭೇಟಿ ನೀಡಿ, ಸ್ಥಳೀಯರ ಕುಂದುಕೊರತೆಗಳನ್ನು ಆಲಿಸಿದರು.

ಅನಗೋಳ, ನಾನಾವಾಡಿ, ಮಜಗಾವಿ ಮೊದಲಾದ ಬಡಾವಣೆಗಳಿಗೆ ಭೇಟಿ ನೀಡಿ, ಮುಖಂಡರು ಹಾಗೂ ಕಾರ್ಯಕರ್ತರ ಮನೆಯಲ್ಲಿ ಕೆಲ ಹೊತ್ತು ಚರ್ಚಿಸಿದರು.

ಈ ವೇಳೆ ಮಾತನಾಡಿ, ‘ಮುಂದಿನ ದಿನಗಳಲ್ಲಿ ದಕ್ಷಿಣ ಮತಕ್ಷೇತ್ರದ ಎಲ್ಲ ವಾರ್ಡ್‌ಗಳಿಗೂ ಭೇಟಿ ನೀಡುತ್ತೇನೆ. ಪಾಲಿಕೆ ಚುನಾವಣೆಯಲ್ಲಿ ನಾವು ಸೋತರೂ ಜನರೊಂದಿಗೆ ಇದ್ದೇವೆ. ನಿಮ್ಮ ಸಮಸ್ಯೆಗಳ ಪರಿಹಾರಕ್ಕೆ ಸದಾ ಸ್ಪಂದಿಸುತ್ತೇವೆ’ ಎಂದು ಭರವಸೆ ನೀಡಿದರು.

‘ಪಾಲಿಕೆ ಚುನಾವಣೆಯಲ್ಲಿ ದಕ್ಷಿಣ ಮತಕ್ಷೇತ್ರದಲ್ಲಿ ನಮಗೆ ಹೆಚ್ಚಿನ ಸ್ಥಾನಗಳು ಬರಬೇಕಾಗಿತ್ತು. ಆದರೆ, ಎಂಇಎಸ್ ಒಳಜಗಳದಿಂದ ಬಿಜೆಪಿಯವರಿಗೆ ಲಾಭವಾಯಿತು. ಮುಂದೆ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ. ಕಾರ್ಯಕರ್ತರೆಲ್ಲ ಒಗ್ಗಟ್ಟಾಗಿರಬೇಕು’ ಎಂದರು.

ನಾನಾವಾಡಿ ಮದರಸಾಕ್ಕೆ ಭೇಟಿ ನೀಡಿದರು. ಸ್ಥಳೀಯರಾದ ಅರ್ಚನಾ ಮೇಸ್ತ್ರಿ, ಲತೀಫ್ ಫೀರಜಾದೆ, ಕುರ್ಸಿದ್ ಮುಲ್ಲಾ, ಚೋಗ್ರಾ ಮೊಮಿನ್ ಆನಿಗೋಳ, ಶಂಕರ ಬರಮನ್ನವರ, ರಾಘವೇಂದ್ರ ಲೋಕರಿ, ಈರಪ್ಪ ತಿಗಡಿ, ಸರಳಾ ಸಾತಪುತೆ ಸೇರಿದಂತೆ ಮುಖಂಡರ ಮನೆಗೆ ಭೇಟಿ ಕೊಟ್ಟರು.

ತಮ್ಮನ್ನು ಭೇಟಿಯಾಗಬೇಕು ಎಂಬ ರೇಣುಕಾನಗರದ ಅಭಿಮಾನಿ ಗಣಪತಿ ಅಶೋಕ ಸೊಂಟಕ್ಕಿ (ವಿಶೇಷ ವ್ಯಕ್ತಿ) ಬಯಕೆಯನ್ನು ಈಡೇರಿಸಿದರು. ಅವರೊಂದಿಗೆ ಆತ್ಮೀಯವಾಗಿ ಮಾತನಾಡಿದರು.

ಕಾಂಗ್ರೆಸ್ ಗ್ರಾಮೀಣ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರದೀಪ ಎಂ.ಜೆ., ದಕ್ಷಿಣ ಮತಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಜ್ಜಪ್ಪ ಡಗೆ, ಮುಖಂಡರಾದ ಪರಶುರಾಮ ಡಗೆ, ಫಜಲ ಮಕಾನದಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT