‘ನನ್ನ ಮೇಲೆ ದೌರ್ಜನ್ಯ ಎಸಗಿ, ಮತಾಂತರಕ್ಕೆ ಒತ್ತಾಯ ಮಾಡಿದವರಲ್ಲಿ ಇಬ್ಬರನ್ನು ಮಾತ್ರ ಬಂಧಿಸಲಾಗಿದೆ. ಇನ್ನೂ ಐವರು ಊರಲ್ಲೇ ಓಡಾಡುತ್ತಿದ್ದಾರೆ. ನನಗೆ ಹಾಗೂ ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ. ಆರೋಪಿಗಳನ್ನು ಬಂಧಿಸಬೇಕು. ನಮ್ಮ ಕುಟುಂಬಕ್ಕೆ ರಕ್ಷಣೆ ಕೊಡಬೇಕು’ ಎಂದು ಸವದತ್ತಿ ತಾಲ್ಲೂಕಿನ ಮುನವಳ್ಳಿಯ ಸಂತ್ರಸ್ತ ಮಹಿಳೆ ಆಗ್ರಹಿಸಿದರು. ಬೆಳಗಾವಿಯಲ್ಲಿ ಗುರುವಾರ ಮಾತನಾಡಿದ ಮಹಿಳೆ, ‘ನಿರಂತರ ದೌರ್ಜನ್ಯ ಎಸಗಿ ನನ್ನ ಖಾಸಗಿ ಫೋಟೊ, ವಿಡಿಯೊಗಳನ್ನು ಮಾಡಿಕೊಂಡಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ಬಹಿರಂಗ ಮಾಡುವ ಬೆದರಿಕೆ ಹಾಕಿದ್ದಾರೆ. ನಾನು ಏಳು ಮಂದಿ ವಿರುದ್ಧ ದೂರು ನೀಡಿದ್ದೇನೆ. ಇದರಲ್ಲಿ ರಫೀಕ್ ಬೇಪಾರಿ ಹಾಗೂ ಆತನ ಪತ್ನಿಯನ್ನು ಮಾತ್ರ ಬಂಧಿಸಲಾಗಿದೆ. ಉಳಿದವರಿಂದ ಜೀವಭಯವಿದೆ’ ಎಂದರು.