ಎಂ.ಕೆ.ಹುಬ್ಬಳ್ಳಿ(ಬೆಳಗಾವಿ ಜಿಲ್ಲೆ): ಶಹನಾಯಿ ವಾದನ, ಗಾಯನದ ಮೂಲಕ ದೇಶ, ವಿದೇಶಗಳಲ್ಲಿ ಮಿಂಚಿರುವ ಚನ್ನಮ್ಮನ ಕಿತ್ತೂರು ತಾಲ್ಲೂಕಿನ ಎಂ.ಕೆ.ಹುಬ್ಬಳ್ಳಿಯ ಬಾಳೇಶ ಸಣ್ಣಭರಮಪ್ಪ ಭಜಂತ್ರಿ(65) ಈ ಬಾರಿ ರಾಜ್ಯೋತ್ಸವದ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕನ್ನಡ, ಹಿಂದಿ, ತಮಿಳು, ಮಲಯಾಳಂ, ತೆಲುಗು ಸೇರಿದಂತೆ ಹಲವು ಭಾಷೆಗಳ 50 ಸಾವಿರಕ್ಕೂ ಅಧಿಕ ಗೀತೆಗಳಿಗೆ ಶಹನಾಯಿ ನುಡಿಸಿದ್ದಾರೆ. ಐದು ದಶಕಗಳಿಂದ ಕಲಾರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸದ್ಯ ತಮಿಳುನಾಡಿನ ಚೆನ್ನೈನಲ್ಲಿ ನೆಲೆಸಿದ್ದಾರೆ.
ಪಂಡಿತ ಪುಟ್ಟರಾಜ ಗವಾಯಿ, ಉಸ್ತಾದ್ ಬಿಸ್ಮಿಲ್ಲಾ ಖಾನ್, ಡಿ.ಪಿ.ಹಿರೇಮಠ, ಕೋದಂಡ ಸಾಳವಂಕಿ ಅವರ ಗರಡಿಯಲ್ಲಿ ಪಳಗಿದ ಅವರಿಗೆ ತಮಿಳುನಾಡು ಸರ್ಕಾರವೂ ಪ್ರಶಸ್ತಿ ನೀಡಿ ಗೌರವಿಸಿದೆ. ಅವರ ಮೂವರು ಪುತ್ರರೂ ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ.
‘ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿರುವುದಕ್ಕೆ ಖುಷಿಯಾಗಿದೆ. 40 ವರ್ಷಗಳಿಂದ ನಾನು ತಮಿಳುನಾಡಿನಲ್ಲಿ ನೆಲೆಸಿದ್ದೇನೆ. ಆದರೆ, ನಾನು ಜನಿಸಿದ ಮತ್ತು ಸಂಗೀತ ಕಲಿತ ಕರ್ನಾಟಕದಿಂದ ಪ್ರಶಸ್ತಿ ದೊರೆತಿರುವುದು ಸಂಭ್ರಮ ಇಮ್ಮಡಿಗೊಳಿಸಿದೆ’ ಎಂದು ಬಾಳೇಶ ಭಜಂತ್ರಿ ‘ಪ್ರಜಾವಾಣಿ’ಯೊಂದಿಗೆ ಸಂತಸ ಹಂಚಿಕೊಂಡರು.