ಬೆಳಗಾವಿ: ತಾಲ್ಲೂಕಿನ ರಕ್ಕಸಕೊಪ್ಪ- ಬೆಳಗುಂದಿ ರಸ್ತೆಯಲ್ಲಿ ಸೋಮವಾರ ತಡರಾತ್ರಿ ಕಾರು ಮರಕ್ಕೆ ಡಿಕ್ಕಿ ಹೊಡೆದು ಯೋಧ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಬೆಳಗುಂದಿ ನಿವಾಸಿ ಓಂಕಾರ ಮಹಾದೇವ ಹಿಂಡಲಗೇಕರ್ (23) ಮೃತಪಟ್ಟ ಯೋಧ. ಎರಡು ವರ್ಷಗಳ ಹಿಂದೆ ಭಾರತೀಯ ಸೇನೆಗೆ ಸೇರಿದ ಈ ಯೋಧ ಹತ್ತು ದಿನಗಳ ಹಿಂದಷ್ಟೇ ರಜೆಯ ಮೇಲೆ ಗ್ರಾಮಕ್ಕೆ ಮರಳಿದ್ದರು.
ಸೋಮವಾರ ರಾತ್ರಿ ಊರಿನಿಂದ ಹೊರಹೋಗಿದ್ದ ಓಂಕಾರ ತಡರಾತ್ರಿ ಮರಳಿ ತಮ್ಮೂರಿಗೆ ಹೊರಟಿದ್ದರು.
ಅತಿ ವೇಗವಾಗಿ ಸಂಚರಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದು, ಪಲ್ಟಿಯಾಗಿ ಬಿದ್ದಿತು. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.
ತೀವ್ರ ರಕ್ತಸ್ರಾವದಿಂದ ಯೋಧ ಸ್ಥಳದಲ್ಲೇ ಕೊನೆಯುಸಿರೆಳೆದರು ಎಂದು ಪೊಲೀಸರು ತಿಳಿಸಿದ್ದಾರೆ.