ಬೆಳಗಾವಿ: ‘ಗಡಿ ಭಾಗದಲ್ಲಿನ ಕನ್ನಡ ದಿನಪತ್ರಿಕೆಗಳ ಸ್ಥಿತಿಗತಿಗಳ ಕುರಿತು ಚರ್ಚೆಗಾಗಿ ವಿಶೇಷ ಕಾರ್ಯಕ್ರಮವನ್ನು ಫೆಬ್ರುವರಿಯಲ್ಲಿ ಇಲ್ಲೇ ಹಮ್ಮಿಕೊಳ್ಳಲಾಗುವುದು’ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ. ಸೋಮಶೇಖರ್ ಹೇಳಿದರು.
ಜಿಲ್ಲಾ ಮತ್ತು ಪ್ರಾದೇಶಿಕ ದಿನಪತ್ರಿಕೆಗಳ ಸಂಪಾದಕರ ಸಂಘದ ಅಧ್ಯಕ್ಷ ಮುರಗೇಶ ಶಿವಪೂಜಿ ಅವರೊಂದಿಗೆ ಇಲ್ಲಿನ ಹುಕ್ಕೇರಿ ಹಿರೇಮಠದಲ್ಲಿ ಸೋಮವಾರ ಅವರು ಮಾತನಾಡಿದರು.
‘ಗಡಿ ಭಾಗದಲ್ಲಿನ ಕನ್ನಡ ದಿನಪತ್ರಿಕೆಗಳ ಸಮಸ್ಯೆಗಳ ಮತ್ತು ಸ್ಥಿತಿಗತಿಗಳ ಕುರಿತು ವಿಸ್ತೃತವಾದ ಚರ್ಚೆ ನಡೆಸಿ, ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು’ ಎಂದರು.
‘ಗಡಿಯಲ್ಲಿನ ಪ್ರತಿ ಕನ್ನಡ ಸರ್ಕಾರಿ ಶಾಲೆಗೆ ದಿನಪತ್ರಿಕೆಗಳನ್ನು ತರಿಸಿಕೊಳ್ಳುವುದು, ಕನ್ನಡ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಕುರಿತು ಪ್ರಾಧಿಕಾರವು ವಿಶೇಷ ಗಮನಹರಿಸಲಿದೆ’ ಎಂದು ಭರವಸೆ ನೀಡಿದರು.