ಬೆಳಗಾವಿ: ‘ಪರೀಕ್ಷಾ ದಿನಗಳು ಸಮೀಪಿಸಿದಂತೆ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಬಾರದು. ಪ್ರಮುಖ ವಿಷಯಗಳನ್ನು ಸಂಕ್ಷಿಪ್ತವಾಗಿ ಟಿಪ್ಪಣಿ ಮಾಡಿಕೊಂಡು ಓದಬೇಕು. ಆರೋಗ್ಯದ ಕಡೆಗೂ ಗಮನ ಹರಿಸಬೇಕು’ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಕನಕಪ್ಪ ಪೂಜಾರ ಹೇಳಿದರು.
ಇಲ್ಲಿನ ರಾಮತೀರ್ಥ ನಗರದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಶುಕ್ರವಾರ ನಡೆದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಪ್ರೇರಣಾ ಕಾರ್ಯಾಗಾರ ಹಾಗೂ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಯಾವುದೇ ವಿಷಯದ ಬಗ್ಗೆ ಗೊಂದಲಕ್ಕೆ ಒಳಗಾಗಬೇಡಿ. ಪರೀಕ್ಷಾ ಕೋಣೆಯಲ್ಲಿ ಸಮಚಿತ್ತದಿಂದ ಪ್ರಶ್ನೆಪತ್ರಿಕೆ ಓದಿ. ಅರ್ಥವಾಗುವ ಪ್ರಶ್ನೆಗಳಿಗೆ ಮೊದಲು ಉತ್ತರಿಸಿ. ವಾಕ್ಯಗಳ ರಚನೆ, ಬರವಣಿಗೆ ಉತ್ತಮವಾಗಿರಲಿ. ಆಗ ಉತ್ತಮ ಅಂಕ ಗಳಿಸಬಹುದು’ ಎಂದು ಕಿವಿಮಾತು ಹೇಳಿದರು.
ಎಂಬಿಬಿಎಸ್ ವಿದ್ಯಾರ್ಥಿ ಮಹಮ್ಮದ್ ಕೈಫ್ ಮುಲ್ಲಾ ಮಾತನಾಡಿ, ‘ಉತ್ತಮ ಅಂಕ ಗಳಿಕೆಗಾಗಿ ದಿನವಿಡೀ ಓದುತ್ತಲೇ ಕುಳಿತುಕೊಳ್ಳುವ ಅಗತ್ಯವಿಲ್ಲ. ನಿಗದಿತ ವೇಳಾಪಟ್ಟಿ ಸಿದ್ಧಪಡಿಸಿಕೊಂಡು ಯೋಜನಾ ಬದ್ಧವಾಗಿ ಓದಬೇಕು. ಬದುಕಿನಲ್ಲಿ ಶಿಸ್ತು ಅಳವಡಿಸಿಕೊಳ್ಳಬೇಕು. ಸಾಧನೆಗೆ ಅಡ್ಡ ದಾರಿಗಳಿಲ್ಲ. ಪರಿಶ್ರಮದ ಮೂಲಕವೇ ಸಾಧನೆ ಪಥವೇರಬೇಕು’ ಎಂದು ಸಲಹೆ ನೀಡಿದರು.
ತಾವು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದ ಬಗೆ ಹಾಗೂ ಓದಿದ ರೀತಿಯನ್ನು ಅವರು ಎಳೆಎಳೆಯಾಗಿ ಬಿಚ್ಚಿಟ್ಟರು. ವಿವಿಧ ಸ್ಪರ್ಧೆ ಹಾಗೂ ಕ್ರೀಡಾಕೂಟಗಳಲ್ಲಿ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.
ಮುಖ್ಯಶಿಕ್ಷಕ ಡಾ.ರಾಜಶೇಖರ ಚಳಗೇರಿ ಅಧ್ಯಕ್ಷತೆ ವಹಿಸಿದ್ದರು. ಮಹಾನಗರ ಪಾಲಿಕೆ ಸದಸ್ಯ ಹನುಮಂತ ಕೊಂಗಾಲಿ, ಸಾಮಾಜಿಕ ಕಾರ್ಯಕರ್ತ ಸುರೇಶ ಯಾದವ, ‘ಪ್ರಜಾವಾಣಿ’ ಜಿಲ್ಲಾ ವರದಿಗಾರ ಸಂತೋಷ ಈ. ಚಿನಗುಡಿ, ಇಮಾಮ್ಹುಸೇನ್ ಗೂಡುನವರ, ಶಿಕ್ಷಕರಾದ ಹರೂನ್ ಮುಲ್ಲಾ, ಬಿ.ಎಸ್.ಮಿಲ್ಲಾನಟ್ಟಿ ಇದ್ದರು. ಭಾರತಿ ಲೋನಾರಿ ಸ್ವಾಗತಿಸಿದರು. ಜ್ಯೋತಿ ಬೇಲಿಕೇರಿ ನಿರೂಪಿಸಿದರು. ಎಂ.ಎಸ್.ತುರಮರಿ ವಂದಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.